ಬೆಂಗಳೂರು: ವಿಮಾನ ಹಾರುವಾಗ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ ಆರೋಪದಡಿ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಠಾಣೆ ಪೊಲಿಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರ ಮೂಲದ ಸ್ವಪ್ನಿಲ್ ಹೋಲೆ (32) ಬಂಧಿತ. ಇಂಡಿಗೋ ಏರ್ಲೈನ್ಸ್ ಮಹಿಳಾ ಉದ್ಯೋಗಿ ಅನು ಪಿ. ಟಾಮ್ ಎಂಬುವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೆ.30ರ ರಾತ್ರಿ 11 ಗಂಟೆಗೆ ನಾಗಪುರ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್ಗೆ ತೆರಳಲು ಇಂಡಿಗೋ ಏರ್ಲೈನ್ಸ್ ವಿಮಾನವನ್ನು ಸ್ವಪ್ನಿಲ್ ಹತ್ತಿದ್ದ. ನಾಗಪುರದಿಂದ ಹೊರಟ ವಿಮಾನ ಕೆಐಎಗೆ ಬಂದು ಇಳಿದು ಆನಂತರ ಬ್ಯಾಂಕಾಕ್ಗೆ ತೆರಳಿದೆ. ನಾಗಪುರದಿಂದ ವಿಮಾನ ಬೆಂಗಳೂರಿನತ್ತ ಬರುವಾಗ ನಂಬರ್ 5 ಆಸನದಲ್ಲಿ ಕುಳಿತಿದ್ದ ಸ್ವಪ್ನಿಲ್, ಏಕಾಏಕಿ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನಿಸಿದಾಗ ವಿಮಾನ ಸಿಬ್ಬಂದಿ ಆತನನ್ನು ತಡೆದಿದ್ದಾರೆ.
ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ವಿಮಾನ ಸಿಬ್ಬಂದಿ ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳಿಗೆ ಪ್ರಯಾಣಿಕನ ಬಗ್ಗೆ ದೂರು ನೀಡಿದ್ದರು. ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಐಎ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.