ಚಿತ್ರದುರ್ಗ: ಹೊರಕೆರೆ ದೇವರಪುರದಲ್ಲಿ ಫೆ.6, 7ರಂದು ನಡೆಯಲಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಅನ್ನದಕೋಟೆ ಹಾಗೂ ಗುಂಡಿನ ಸೇವೆ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಉತ್ಸವ ಈ ಬಾರಿ 17 ವರ್ಷಗಳ ಬಳಿಕ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಇಡೀ ಊರು ಸಡಗರ, ಸಂಭ್ರಮದಲ್ಲಿ ಮೀಯುತ್ತಿದೆ. ಗ್ರಾಮಸ್ಥರು ಕಳೆದೊಂದು ವಾರದಿಂದ ಮನೆಗಳಿಗೆ ಸುಣ್ಣ, ಬಣ್ಣ ಬಳಿಯುತ್ತಿದ್ದಾರೆ. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳು ಅಭಿವೃದ್ಧಿ ಕಾಣುತ್ತಿವೆ. ದೂರದ ಊರಿನಿಂದ ನೆಂಟರಿಷ್ಟರು ಆಗಮಿಸುತ್ತಿದ್ದಾರೆ.
ಎಚ್ಡಿ ಪುರ ದೇವಸ್ಥಾನ ಹಾಗೂ ಕೃಷ್ಣಾಚಲ ಬೆಟ್ಟದಲ್ಲಿ ವಿಶೇಷ ಪೂಜೆ ಪುನಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ್, ತಹಸೀಲ್ದಾರ್ ರೇಖಾ ಇತರರು ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗುಂಡಿನ ಸೇವೆ ನಡೆಯಲಿರುವ ಕೃಷ್ಣಾಚಲ ಬೆಟ್ಟಕ್ಕೆ ಹೊಳಲ್ಕೆರೆ ತಹಸೀಲ್ದಾರ್ ರೇಖಾ, ಅಧಿಕಾರಿಗಳ ತಂಡದೊಂದಿಗೆ ಗುರುವಾರ ತೆರಳಿ ಸಿದ್ಧತೆಗಳನ್ನು ಪರಿಶೀಲಿಸಿದರು.
33 ಹಳ್ಳಿಗಳ ದೇವರು ಆಗಮನ: ಅನ್ನದಕೋಟೆ ಹಾಗೂ ಗುಂಡಿನ ಸೇವೆ ಉತ್ಸವಕ್ಕೆ ಸುತ್ತಮುತ್ತಲಿನ 33 ಹಳ್ಳಿಗಳ ದೇವರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ದೇವರನ್ನು ಕೂರಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ದೇವಸ್ಥಾನದ ಎದುರು ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಪರ ಊರುಗಳಿಂದ ಬರುವ ಭಕ್ತರ ವಾಹನಗಳ ನಿಲುಗಡೆಗೆ 40 ಎಕರೆ ಜಾಗ ಗುರುತಿಸಲಾಗಿದೆ. ದೇವಸ್ಥಾನದ ಎದುರಿನ ಪುಷ್ಕರಣಿ ಪೂರ್ಣ ಭರ್ತಿಯಾಗಿದ್ದು, ಅಲ್ಲಿ ದೇವರಿಗೆ ಗಂಗಾಸ್ನಾನ ನೇರವೇರಲಿದೆ. ಎರಡು ದಿನಗಳ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆಯುವರು.
ಹರಿದುಬರುತ್ತಿದೆ ಅಕ್ಕಿ: ಅನ್ನದಕೋಟೆ ಉತ್ಸವಕ್ಕೆ ಭಕ್ತರು ಹಾಗೂ ದೇವಸ್ಥಾನ ಸಮಿತಿ ಅಕ್ಕಿಯನ್ನು ತಂದು ರಾಶಿ ಹಾಕುತ್ತಿದ್ದು, ಗುರುವಾರ ದೇಗುಲದ ಆವರಣದಲ್ಲಿ ಗ್ರಾಮದ ಮಹಿಳೆಯರು ಅಕ್ಕಿಯನ್ನು ಹರವಿ ಶುಚಿಗೊಳಿಸಿದರು.
ಅನ್ನದಕೋಟೆ, ಗುಂಡಿನ ಸೇವೆ ಉತ್ಸವಕ್ಕೆ ಎಲ್ಲರ ಸಹಕಾರದಿಂದ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದಾರೆ. 40 ಎಕರೆ ಜಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಎಚ್.ಡಿ.ರಂಗಯ್ಯ ಅಧ್ಯಕ್ಷರು, ಶ್ರೀಲಕ್ಷ್ಮಿನರಸಿಹ ಸ್ವಾಮಿ ದೇವಸ್ಥಾನ ಸಮಿತಿ