ಸವಣೂರ: ಬರದಿಂದ ಬೆಳೆ ಹಾನಿಗೀಡಾದ ಬಳಿಕ ಸಾಲ ತೀರಿಸುವುದು ಹೇಗೆ ಎಂದು ಮನನೊಂದ ತಾಲೂಕಿನ ಕಡಕೋಳ ಗ್ರಾಮದ ರೈತರೊಬ್ಬರು ಶುಕ್ರವಾರ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾರೆ.
ನಾಗಪ್ಪ ಬಸವಣ್ಣೆಪ್ಪ ದೊಡ್ಡಮನಿ (57) ಮೃತಪಟ್ಟ ರೈತ. ನಾಗಪ್ಪ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2.76 ಲಕ್ಷ ರೂ., ಕೆವಿಜಿ ಬ್ಯಾಂಕ್ನಲ್ಲಿ 2.50 ಲಕ್ಷ ರೂ. ಸಾಲ ಮಾಡಿದ್ದರು. ಪುತ್ರ ಜಗದೀಶ ಹೆಸರಲ್ಲಿ 2.50 ಲಕ್ಷ ರೂ. ಸಾಲ ಪಡೆದಿದ್ದರು. ಈ ವರ್ಷ ಸರಿಯಾಗಿ ಮಳೆ ಬಾರದೇ ಬೆಳೆ ಬರಲಿಲ್ಲ. ಇದರಿಂದಾಗಿ ಸಾಲ ತೀರಿಸುವುದು ಹೇಗೆ ಎಂದು ಬೇಸರಗೊಂಡ ನಾಗಪ್ಪ ಜಮೀನಿನಲ್ಲಿ ವಿಷ ಸೇವಿಸಿದ್ದರು. ಕಡಕೋಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ಮೃತಪಟ್ಟಿದ್ದಾರೆ ಎಂದು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.