More

    ಕುಮದ್ವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿ ಐದು ದಿನಗಳ ಬಳಿಕ ಪತ್ತೆ

    ರಾಣೆಬೆನ್ನೂರ: ಬಟ್ಟೆ ತೊಳೆಯಲು ಹೋದಾಗ ಕುಮದ್ವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿಯ ಶವ ಐದು ದಿನಗಳ ಬಳಿಕ ಪತ್ತೆಯಾಗಿದೆ.

    ತಾಲೂಕಿನ ಮಲಕನಹಳ್ಳಿ ಗ್ರಾಮದ ಯುವತಿ ಶಶಿಕಲಾ ಶಿವಪ್ಪ ಮಾಳಿಗೇರ (19) ನದಿಪಾತ್ರದಲ್ಲಿ ಕಳೆದ ಸೋಮವಾರ ಸಂಜೆ ಬಟ್ಟೆ ತೊಳೆಯಲು ಹೋಗಿ ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಳು.

    ಹಲಗೇರಿ ಠಾಣೆ ಪಿಎಸ್​ಐ ಮಂಜುನಾಥ ಕುಪ್ಪೇಲೂರ ಹಾಗೂ ಹರಿಹರದ ಮುಳುಗು ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಸಂಜೆಯಿಂದಲೇ ಯುವತಿಗಾಗಿ ಹುಡುಕಾಟ ನಡೆಸಿದ್ದರು. ಸ್ಥಳೀಯರು ತೆಪ್ಪದ ಮೂಲಕ ಕುಮದ್ವತಿಯು ತುಂಗಭದ್ರಾ ನದಿ ಸೇರುವ ಸ್ಥಳದವರೆಗೂ ಮಂಗಳವಾರ ಹುಡುಕಾಟ ನಡೆಸಿದ್ದರು. ಆದರೆ, ನೀರಿನ ಸೆಳೆತ ಹೆಚ್ಚಿರುವ ಕಾರಣ ಯುವತಿಯ ಸುಳಿವು ದೊರೆತಿರಲಿಲ್ಲ.

    ಶಿವಪ್ಪ ಹಾಗೂ ನಾಗಮ್ಮ ದಂಪತಿ ಪುತ್ರಿಯಾಗಿರುವ ಶಶಿಕಲಾ 10ನೇ ತರಗತಿವರೆಗೆ ಓದಿದ್ದಳು. ಮನೆ ಹಾಗೂ ಕೃಷಿ ಕಾರ್ಯಕ್ಕೆ ಪಾಲಕರಿಗೆ ಸಹಾಯ ಮಾಡುತ್ತಿದ್ದಳು. ಆ. 15ರಂದು ಮನೆಯಲ್ಲಿ ಶಶಿಕಲಾ ಜನ್ಮದಿನ ಆಚರಿಸಿಕೊಂಡಿದ್ದಳು.

    ಸೋಮವಾರ ತಾಯಿ ನಾಗಮ್ಮ ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ದಂಪತಿಯಿಬ್ಬರೂ ಚಿಕಿತ್ಸೆಗಾಗಿ ಸೋಮವಾರ ರಾಣೆಬೆನ್ನೂರಿಗೆ ತೆರಳಿದ್ದರು. ಶಶಿಕಲಾ ಅವರ ಸಹೋದರ ಜಮೀನಿಗೆ ತೆರಳಿದ್ದ. ಬೆಳಗ್ಗೆಯಿಂದ ಸಂಜೆಯವರೆಗೆ ಮನೆ ಕೆಲಸ ಮಾಡಿದ ಶಶಿಕಲಾ, ಸಂಜೆ ಬಟ್ಟೆ ತೊಳೆಯಲು ನದಿಪಾತ್ರಕ್ಕೆ ತೆರಳಿದ್ದಳು. ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಳು.

    ಇರುವ ಒಬ್ಬ ಮಗ, ಒಬ್ಬ ಮಗಳಿಗೆ ಒಂದೇ ಬಾರಿಗೆ ಮದುವೆ ಮಾಡುವ ಕನಸು ಕಂಡಿದ್ದೇವು. ಆದರೀಗ ಕುಮದ್ವತಿ ನದಿ ನೀರು ನಮ್ಮ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡಿದೆ ಎಂದು ಶಶಿಕಲಾ ತಂದೆ-ತಾಯಿ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts