More

    ಎಚ್‌ಐವಿ ಬಾಧಿತರಿಗೆ ತ್ವರಿತವಾಗಿ ಸೌಲಭ್ಯ ಕಲ್ಪಿಸಿ; ಶಾಲಾ-ಕಾಲೇಜ್‌ಗಳಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಿ; ಡಿಸಿ ರಘುನಂದನ ಮೂರ್ತಿ

    ಹಾವೇರಿ: ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಶೇಷವಾಗಿ ಆಚರಿಸಬೇಕು. ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ ಜಿಲ್ಲೆಯ ಎಲ್ಲ ಶಾಲಾ-ಕಾಲೇಜ್‌ಗಳಲ್ಲಿ ವಿಶೇಷ ಚಟುವಟಿಕೆ, ಉಪನ್ಯಾಸ, ಎಚ್.ಐ.ವಿ. ಏಡ್ಸ್ ಕುರಿತು ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಪೂರ್ವಸಿದ್ಧತೆ ಹಾಗೂ ಎಚ್.ಐ.ವಿ. ಸೋಂಕಿತರಿಗೆ ಸರ್ಕಾರದಿಂದ ದೊರೆಯುವ ಸಾಮಾಜಿಕ ಸೌಲಭ್ಯಗಳ ಅನುಷ್ಠಾನ ಕುರಿತಾಗಿ ಪ್ರಗತಿ ಪರಿಶೀಲಿಸಿದ ಅವರು, ಏಡ್ಸ್ ದಿನ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದರು.
    ಎಚ್‌ಐವಿ ಬಾಧಿತರಿಗೆ ಸರ್ಕಾರದಿಂದ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು. ವಿಶೇಷ ಪಾಲನಾ ಯೋಜನೆಯಡಿ ಎಚ್.ಐ.ವಿ. ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಎಲ್ಲ ಬಾಧಿತ ಮತ್ತು ಸೋಂಕಿತ ಮಕ್ಕಳು ಪಡೆಯುವಂತಾಗಬೇಕು. ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಮಕ್ಕಳಿಗೆ ಸೌಲಭ್ಯ ದೊರಕಿಸಿಕೊಡಲು ಸೂಚನೆ ನೀಡಿದರು.
    ಎಚ್.ಐ.ವಿ.ಸೋಂಕಿತರಿಗೆ ಉಚಿತ ಪರೀಕ್ಷೆಗಳು ಮತ್ತು ಚಿಕಿತ್ಸೆಗಳು ಎಲ್ಲ ಸರ್ಕಾರಿ ಆಸ್ಪತ್ರೆಗಳ ಜತೆಗೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲೂ ಸೌಲಭ್ಯ ನೀಡಲಾಗುತ್ತಿದೆ. ಈ ಕುರಿತಂತೆ ಅರಿವು ಮೂಡಿಸಿ. ಎ.ಆರ್.ಟಿ. ಚಿಕಿತ್ಸೆಗಾಗಿ ಆಗಮಿಸುವ ಎಚ್.ಐ.ವಿ. ಬಾಧಿತರಿಗೆ ಪ್ರಯಾಣ ಭತ್ಯೆಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಒಂದನೇ ತರಗತಿಯಿಂದ ಒಂಭತ್ತನೇ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಸೌಲಭ್ಯ ದೊರಕಿಸಿಕೊಡಲು ಕ್ರಮವಹಿಸಿ ಎಂದರು.
    ಎಚ್.ಐ.ವಿ.ಬಾಧಿತರ ಪೈಕಿ ನಿವೇಶನ ಮತ್ತು ಮನೆಗಳಿಗೆ ಅರ್ಜಿ ಸಲ್ಲಿಸಿದರೆ ಆಯ್ಕೆ ಸಂದರ್ಭದಲ್ಲಿ ಅವಕಾಶಗಳಿದ್ದರೆ ಪರಿಗಣಿಸುವಂತೆ ತಿಳಿಸಿದರು.
    ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 675 ಎಚ್.ಐ.ವಿ.ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡಲಾಗುತ್ತಿದೆ. ಪ್ರಸಕ್ತ ವರ್ಷ 23 ಮಕ್ಕಳು ಈ ಯೋಜನೆ ನೆರವು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಧನಶ್ರೀ ಯೋಜನೆಯಡಿ ಸ್ವಉದ್ಯೋಗ ಕೈಗೊಳ್ಳಲು 23 ಫಲಾನುಭವಿಗಳಿಗೆ ತಲಾ 30 ಸಾವಿರ ರೂ. ಸಾಲವನ್ನು ಬ್ಯಾಂಕಿನಿಂದ ಮಂಜೂರು ಮಾಡಲಾಗಿದೆ. ಚೇತನಾ ಯೋಜನೆಯಡಿ 6 ದಮನಿತ ಮಹಿಳೆಯರಿಗೆ ತಲಾ 30 ಸಾವಿರ ರೂ. ಸಾಲ ನೀಡಲಾಗಿದೆ ಎಂದರು.
    ವಿವಿಧ ನಿಗಮಗಳಲ್ಲಿ ಎಚ್.ಐ.ವಿ. ಬಾಧಿತ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯದ ಆಯ್ಕೆಯಲ್ಲಿ ಆದ್ಯತೆ ನೀಡಬೇಕು. ನಿವೇಶನ ಮತ್ತು ಮನೆ ಹಂಚಿಕೆಯಲ್ಲಿ ಆದ್ಯತೆ ನೀಡುವಂತೆ ಸಂಘಟನೆಯ ಮುಖ್ಯಸ್ಥರು ಮನವಿ ಮಾಡಿಕೊಂಡರು.
    ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ.ಜಗದೀಶ, ಡಾ.ಪ್ರಭಾಕರ, ಕೆ.ಸಿ.ಅಕ್ಷತಾ, ತಾಲೂಕು ಆರೋಗ್ಯಾಧಿಕಾರಿಗಳು, ಇತರ ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts