More

    44 ಕೋಟಿ ರೂ. ಆದಾಯ ನಿರೀಕ್ಷೆ; 11.42 ಲಕ್ಷ ಉಳಿತಾಯದ ಬಜೆಟ್; ಹಾವೇರಿ ನಗರಸಭೆಯಲ್ಲಿ ಡಿಸಿ ರಘುನಂದನ ಮೂರ್ತಿ ಮಂಡನೆ

    ವೇರಿ: ಇಲ್ಲಿನ ಹಾವೇರಿ ನಗರಸಭೆಯ 2024-25ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಮಂಗಳವಾರ 11.42 ಲಕ್ಷ ರೂ. ಉಳಿತಾಯ ಬಜೆಟ್ ಸೇರಿದಂತೆ ಒಟ್ಟಾರೆ 44.54 ಕೋಟಿ ರೂ. ಆದಾಯ ನಿರೀಕ್ಷೆಯ ಬಜೆಟ್ ಮಂಡಿಸಿದರು.
    ಪ್ರಾರಂಭಿಕ ಶುಲ್ಕ 6.10 ಕೋಟಿ ರೂ., ನಿರೀಕ್ಷಿತ ಜಮೆಗಳು 25.72 ಕೋಟಿ ರೂ., ನಿರೀಕ್ಷಿತ ಬಂಡವಾಳ 9.55 ಕೋಟಿ ರೂ., ನಿರೀಕ್ಷಿತ ಅಸಾಮಾನ್ಯ ಜಮೆ 9.27 ಕೋಟಿ ರೂ. ಸೇರಿದಂತೆ ಒಟ್ಟು 44.54 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ನಿರೀಕ್ಷಿತ ರಾಜಸ್ವ ಪಾವತಿ 23.55 ಕೋಟಿ ರೂ., ನಿರೀಕ್ಷಿತ ಬಂಡವಾಳ ಪಾವತಿ 11.61 ಕೋಟಿ ರೂ., ನಿರೀಕ್ಷಿತ ಅಸಾಮಾನ್ಯ ಪಾವತಿ 9.27 ಕೋಟಿ ರೂ. ಸೇರಿದಂತೆ ಒಟ್ಟು 44.43 ಕೋಟಿ ರೂ. ನಿರೀಕ್ಷಿತ ಖರ್ಚು ಅಂದಾಜಿಸಲಾಗಿದೆ.
    ನಗರಸಭೆಯ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳಿಂದ ಒಟ್ಟು 16.02 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.
    ನಗರದ ಎಲ್ಲ ನಾಗರಿಕರಿಗೂ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗಾಗಿ ಈಗಾಗಲೇ ನಗರದಲ್ಲಿನ 24/7 ಯೋಜನೆ ಅನುಷ್ಠಾನಗೊಂಡಿದ್ದು, ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ನೀರು ಸರಬರಾಜು ನಿರ್ವಹಣೆ ಮತ್ತು ವಾಲ್‌ಮನ್‌ಗಳ ವೇತನ ನಿರ್ವಹಣೆಗಾಗಿ 2.12 ಕೋಟಿ ರೂ. ಮೀಸಲಿರಿಸಲಾಗಿದೆ.
    ರಸ್ತೆ, ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ 3.95 ಕೋಟಿ ರೂ., ಬೀದಿದೀಪಗಳ ವಾರ್ಷಿಕ ನಿರ್ವಹಣೆಗೆ 1.15 ಕೋಟಿ ರೂ., ಸಾರ್ವಜನಿಕ ಶೌಚಗೃಹ ನಿರ್ಮಾಣ ಮತ್ತು ದುರಸ್ತಿಗಾಗಿ 20 ಲಕ್ಷ ರೂ., ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಲ್ಯಾಂಡ್ ಫಿಲ್ ಸೈಟ್ ಅಭಿವೃದ್ಧಿಗಾಗಿ 1.54 ಕೋಟಿ ರೂ., ನಗರಸಭೆ ಹೈಸ್ಕೂಲ್ ಅಭಿವೃದ್ಧಿಗಾಗಿ 5 ಲಕ್ಷ ರೂ., ಉದ್ಯಾನಗಳ ಅಭಿವೃದ್ಧಿಗೆ 50 ಲಕ್ಷ ರೂ. ವಿನಿಯೋಗಿಸಲಾಗುವುದು ಎಂದು ಹೇಳಿದರು.
    ವೃತ್ತಗಳ ಅಭಿವೃದ್ಧಿಗೆ 30 ಲಕ್ಷ ರೂ. :
    ನಗರದ ಅಂದ ಹೆಚ್ಚಿಸುವ ಸಲುವಾಗಿ ಆಯ್ದ ವೃತ್ತಗಳ ಅಭಿವೃದ್ಧಿಗಾಗಿ 30 ಲಕ್ಷ ರೂ., ಮಳೆ ನೀರು ಚರಂಡಿ ನಿರ್ಮಾಣಕ್ಕಾಗಿ 20 ಲಕ್ಷ ರೂ., ಅಂಗನವಾಡಿ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗಾಗಿ 10 ಲಕ್ಷ ರೂ., ಸ್ಮಶಾನಗಳ ಅಭಿವೃದ್ದಿ ಮತ್ತು ವಿದ್ಯುತ್ ಚಿತಾಗಾರಕ್ಕಾಗಿ 35 ಲಕ್ಷ ರೂ., ನಗರಸಭೆಯ ಹುತಾತ್ಮರ ಸ್ಮಾರಕಗಳ ಅಭಿವೃದ್ಧಿಗೆ 5 ಲಕ್ಷ ರೂ., ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅನುಷ್ಠಾನಕ್ಕೆ 20 ಲಕ್ಷ ರೂ., ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 65 ಲಕ್ಷ ರೂ., ಕಚೇರಿ ಕಟ್ಟಡಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲು 15 ಲಕ್ಷ ರೂ., ಕೆರೆ ಅಭಿವೃದ್ಧಿಗೆ 30 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
    ಮೂಲಸೌಕರ್ಯಕ್ಕೆ ಒತ್ತು
    ಹಾವೇರಿ ನಗರ ರಾಜ್ಯದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿದೆ. ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತಿತರ ಕಾರಣದಿಂದ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಮೂಲಸೌಲಭ್ಯಗಳಾದ ಕುಡಿಯುವ ನೀರು, ಕಸ ವಿಲೇವಾರಿ, ಉತ್ತಮ ಗುಣಮಟ್ಟದ ರಸ್ತೆಗಳು, ಚರಂಡಿ, ಸಾರ್ವಜನಿಕರ ಸುರಕ್ಷತೆ, ಬೀದಿ ದೀಪಗಳನ್ನು ಒದಗಿಸುವುದು ನಗರಸಭೆಯ ಆಧ್ಯ ಕರ್ತವ್ಯವಾಗಿದೆ ಎಂದು ರಘುನಂದನ ಮೂರ್ತಿ ಹೇಳಿದರು.

    ಎಸ್‌ಎಫ್‌ಸಿ ಅನುದಾನ ನಿರೀಕ್ಷೆ
    ಸರ್ಕಾರದಿಂದ ಬಿಡುಗಡೆಯಾಗುವ ನಿರೀಕ್ಷಿತ ಅನುದಾನಗಳಾದ ಎಸ್.ಎಫ್.ಸಿ ಮುಕ್ತನಿಧಿಯಿಂದ 4.29 ಕೋಟಿ ರೂ., ಎಸ್.ಎಫ್.ಸಿ. ವಿದ್ಯುತ್ ಅನುದಾನದಿಂದ 4.50 ಕೋಟಿ ರೂ., ಎಸ್.ಎಫ್.ಸಿ ವೇತನ ಅನುದಾನದಿಂದ 5.20 ಕೋಟಿ ರೂ., ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 15ನೇ ಹಣಕಾಸು ಯೋಜನೆಯಡಿ 7.05 ಕೋಟಿ ರೂ., ಎಸ್.ಎಫ್.ಸಿ. ಕುಡಿಯುವ ನೀರಿನ ಯೋಜನೆಗಾಗಿ 25 ಲಕ್ಷ ರೂ. ಹಾಗೂ ಅಮೃತ 2.0 ನಗರ ಯೋಜನೆಯಡಿ 55 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ ಎಂದು ರಘುನಂದನ ಮೂರ್ತಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts