ಹಾವೇರಿ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ಸೋಮವಾರ ಜಿಲ್ಲೆಯ ಆರು ಕ್ಷೇತ್ರಗಳಿಂದ 21 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ.
ಹಾವೇರಿ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ ನಾಲ್ಕು ಅಭ್ಯರ್ಥಿಗಳಿಂದ 6 ನಾಮಪತ್ರ, ಶಿಗ್ಗಾಂವಿ ಕ್ಷೇತ್ರದಿಂದ ಓರ್ವ ಅಭ್ಯರ್ಥಿಯಿಂದ ಎರಡು ನಾಮಪತ್ರ, ರಾಣೇಬೆನ್ನೂರ ಕ್ಷೇತ್ರದಿಂದ ಎಂಟು ಅಭ್ಯರ್ಥಿಗಳಿಂದ ಎಂಟು ನಾಮಪತ್ರ, ಹಾನಗಲ್ಲ ಕ್ಷೇತ್ರದಿಂದ ಆರು ಅಭ್ಯರ್ಥಿಗಳಿಂದ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ. ಹಿರೇಕೆರೂರ ಕ್ಷೇತ್ರದಿಂದ ಸೋಮವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಹಾವೇರಿ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ರುದ್ರಪ್ಪ ಲಮಾಣಿ(ಎರಡು ನಾಮಪತ್ರ), ಬಹುಜನ ಸಮಾಜ ಪಕ್ಷದಿಂದ ಅಶೋಕ ಮರಿಯಣ್ಣನವರ ಹಾಗೂ ಶಿಗ್ಗಾಂವಿ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಮಂಜುಳಾ ಸಬನೂರ(ಎರಡು) ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಡಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿರುಪಾಕ್ಷಪ್ಪ ಬಳ್ಳಾರಿ (ಎರಡು), ಆಮ್ ಆದ್ಮಿ ಪಕ್ಷದಿಂದ ಸೂಫಿಯಾಬಾನು ನಾಯಿಕ, ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ಸೈಯದ್ ಫಹೀಮ ಗುಡಗೇರಿ, ಆಮ್ ಆದ್ಮಿ ಪಕ್ಷದಿಂದ ಮಹ್ಮದ್ ರಝಾನಾಯಕ(ಎರಡು) ನಾಮಪತ್ರ ಸಲ್ಲಿಸಿದ್ದಾರೆ.