ಹಟ್ಟಿಚಿನ್ನದಗಣಿ: ದಕ್ಷಿಣ ಏಷ್ಯಾದ ಏಕೈಕ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿಯನ್ನು ಖಾಸಗೀಕರಣ ಗೊಳಿಸುವ ಹುನ್ನಾರವನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಆಗ್ರಹಿಸಿದರು.
ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದ ಬಳಿ ಟಿಯುಸಿಐ ಹಮ್ಮಿಕೊಂಡಿದ್ದ ಧರಣಿಯಲ್ಲಿ ಶನಿವಾರ ಮಾತನಾಡಿದರು. ಕಂಪನಿಯ ಕಾಯಂ ಸ್ವರೂಪದ ಕೆಲಸಗಳಾದ ಆಸ್ಪತ್ರೆ, ಕ್ಯಾಂಟೀನ್ ವಿಭಾಗವನ್ನು ಗುತ್ತಿಗೆ ನೀಡಲು ಟೆಂಡರ್ ಕರೆದಿದ್ದು ಆತಂಕಕಾರಿ ವಿಷಯ. ದಿನಕ್ಕೊಂದು ಭಾಗವನ್ನು ಖಾಸಗೀಕರಣಗೊಳಿಸಿ ಹಂತ-ಹಂತವಾಗಿ ಕಂಪನಿಯನ್ನು ಬಂಡವಾಳಗಾರರ ಕೈಗೆ ನೀಡುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಕಾರ್ಮಿಕರು ಜಾಗೃತಗೊಳ್ಳಬೇಕಿದೆ ಎಂದರು.
ಕಾರ್ಮಿಕರ ಕೆಲಸದ ಅವಧಿ ಎಂಟು ಗಂಟೆ ನಿಗದಿಪಡಿಸಬೇಕು. ಮಹಿಳೆಯರನ್ನು ರಾತ್ರಿ ಪಾಳಯದಲ್ಲಿ ದುಡಿಸಿಕೊಳ್ಳುವುದನ್ನು ಕೈಬಿಡಬೇಕು. ಕಂಪನಿ ಆಡಳಿತ ವರ್ಗ ನಿರ್ಲಕ್ಷ ವಹಿಸಿದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.