ಹಟ್ಟಿಚಿನ್ನದಗಣಿ: ಗಣಿ ಕಂಪನಿ ಚಿನ್ನ ಉತ್ಪಾದಿಸುವ ವಿಲ್ಹೇಜ್ ಶಾಫ್ಟಿನೊಳಗಡೆ, ಭದ್ರತಾ ಸಿಬ್ಬಂದಿ ಕೂರುವ ದ್ವಾರದ ಕೂಗಳತೆ ಅಂತರದಲ್ಲಿರುವ ಸ್ಥಳದಲ್ಲಿ ಶನಿವಾರ ತಡರಾತ್ರಿ ಸುಮಾರು 4 ಲಕ್ಷ ರೂ. ಮೌಲ್ಯದ ಶ್ರೀಗಂಧ ಮರಗಳು ಕಳುವಾಗಿವೆ.
ವಿಲ್ಹೇಜ್ ಶಾಫ್ಟಿನ ಕಾಂಪೌಂಡ್ ಗೋಡೆ ಮೇಲಿರುವ ಮುಳ್ಳು ತಂತಿಯನ್ನು ಭೇದಿಸಿ, ಗೋಡೆ ಹಾರಿ ಕಳವು ಮಾಡಿರುವ ಬಗ್ಗೆ ಹಲವು ಅನುಮಾನ ಹುಟ್ಟುಹಾಕಿದೆ. ಮರ ಕಡಿದ ಸುತ್ತಲಿನ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಮೂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಅವರ ಕಾರ್ಯವೈಖರಿ ಪ್ರಶ್ನಿಸುವಂತಿದೆ.
ಇಲಾಖೆ ಸಿಬ್ಬಂದಿ ಪಟ್ಟಣದಲ್ಲೆ ವಾಸ್ತವ್ಯವಿದ್ದು, ಕಳ್ಳರು ಬಳಸುವ ಮಿಷನರಿ ವಸ್ತುಗಳು, ತಂತ್ರಗಾರಿಕೆ ಅರಿತಿದ್ದರೂ ಮೇಲಿಂದ ಮೇಲೆ ಕಳವು ಪ್ರಕರಣಗಳು ಸಂಭವಿಸುತ್ತಿರುವುದು ಅರಣ್ಯ ಇಲಾಖೆಯ ನಡೆ ಬಗ್ಗೆಯೇ ಶಂಕೆ ವ್ಯಕ್ತವಾಗುತ್ತಿದೆ. ಈ ಹಿಂದೆಯೂ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾ ದಾಖಲೆ ಆಧರಿಸಿ ವಿಜಯಪುರ ಜಿಲ್ಲೆವರೆಗೂ ಹೋಗಿದ್ದ ಅಧಿಕಾರಿಗಳು, ಯಾರನ್ನೂ ಬಂಧಿಸದೆ ಖಾಲಿ ಕೈಯಲ್ಲಿ ಹಿಂತಿರುಗಿದ್ದರು.