ಹರಿಹರ: ಸಮೀಪದ ಕೋಡಿಯಾಲ ಹೊಸಪೇಟೆ ತುಂಗಭದ್ರಾ ನದಿ ತಟದಲ್ಲಿ ಮಾ. ೧೯ ರಂದು ೪ನೇ ವರ್ಷದ ತುಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಹೇಳಿದರು.
ರಾಣೇಬೆನ್ನೂರು ತಾಲೂಕು ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪುಣ್ಯಕೋಟಿ ಮಠದ ಆಶ್ರಯದಲ್ಲಿ ಕಳೆದ ೩ ವರ್ಷಗಳಿಂದಲೂ ವಿಜೃಂಭಣೆಯಿಂದ ತುಂಗಾರತಿ ಕಾರ್ಯಕ್ರಮ ಮಾಡಿದ್ದು, ಅದರಂತೆ ಈ ಬಾರಿ ಮಾ. ೧೯ರಂದು ಸಂಜೆ ೬ಕ್ಕೆ ತುಂಗಭದ್ರಾ ನದಿಪಾತ್ರದಲ್ಲಿ ಸಂಗೀತಯುಕ್ತ ತುಂಗಾರತಿ ಹಾಗೂ ನಾಡಿನ ವಿವಿಧ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನೆರವೇರಲಿದೆ ಎಂದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿ ಹಾಗೂ ಹಾನಗಲ್ ತಾಲೂಕು ಹಿರೇಕೌಂಶಿಯ ಗದಿಗೆಯ್ಯ ಶಾಸ್ತ್ರೀ ಹಿರೇಮಠ ಅವರಿಗೆ ಸದ್ವಿದ್ಯಾ ಸಂಜೀವಿನಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮಠದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಜಲಸಂಪನ್ಮೂಲ ಇಲಾಖೆಯಿಂದ ಹದಿನೈದು ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಮಠದ ರಸ್ತೆ, ಸಮುದಾಯ ಭವನ, ದೇವಸ್ಥಾನ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು.