ಹರಪನಹಳ್ಳಿ: ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.
ತಾಲೂಕು ಆಡಳಿತಸೌಧದ ಎದುರು ಜಮಾಯಿಸಿದ ವಿದ್ಯಾರ್ಥಿಗಳು, ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ದೇಶದ ಸೇವೆಗೆ ಸೇರಬೇಕು ಮತ್ತು ಕುಟುಂಬದ ನಿರ್ವಹಣೆ ಮಾಡಬೇಕು ಎಂಬ ಲಕ್ಷಾಂತರ ಯುವಜನರಿಗೆ ಅಗ್ನಿಪಥ ಯೋಜನೆಯಿಂದ ಅನ್ಯಾಯವಾಗುತ್ತಿದೆ. ಯುವಜನರು ಬಯಸುತ್ತಿರುವುದು ಕಾಯಂ ಉದ್ಯೋಗವೇ ಹೊರತು ತಾತ್ಕ್ಕಾಲಿಕ ಉದ್ಯೋಗವಲ್ಲ. ನಾಲ್ಕೇ ವರ್ಷ ಸೇನೆಯಲ್ಲಿ ತಾತ್ಕ್ಕಾಲಿಕ ನೇಮಕ ಮಾಡಿಕೊಂಡು ಆ ನಂತರ ಅವರನ್ನು ಅಲ್ಪ ಮೊತ್ತ ಹಾಗೂ ಪ್ರಮಾಣ ಪತ್ರ ನೀಡಿ ಬಿಡುಗಡೆಗೊಳಿಸಿದರೆ ಅವರ ಮುಂದಿನ ಭವಿಷ್ಯವೇನು? ಸೇನೆಗೆ ತಾತ್ಕ್ಕಾಲಿಕ ನೇಮಕ ವಿಧಾನವು ದೇಶದ ಆಂತರಿಕ ಮತ್ತು ಬಾಹ್ಯ ದೃಷ್ಟಿಯಿಂದ ಅಪಾಯಕಾರಿ. ಕೂಡಲೇ ಯೋಜನೆಯನ್ನು ಕೈಬಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.