ಹನೂರು: ತಾಲೂಕು ವ್ಯಾಪ್ತಿಯ ವಿವಿಧೆಡೆ ಸೋಮವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಜೋರು ಮಳೆ ಸುರಿದಿದ್ದು, ರೈತಾಪಿ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ.
12 ಗಂಟೆಯ ನಂತರ ಬಹುತೇಕ ಗ್ರಾಮಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 12.30ರಲ್ಲಿ ಪಟ್ಟಣ ಸೇರಿದಂತೆ ಬಂಡಳ್ಳಿ, ಶಾಗ್ಯ, ಮಣಗಳ್ಳಿ, ತೊಮಿಯಾರ್ ಪಾಳ್ಯ, ರಾಮಾಪುರ, ಕೆಂಪಯ್ಯನಹಟ್ಟಿ, ದಿನ್ನಳ್ಳಿ ಹಾಗೂ ಲೊಕ್ಕನಹಳ್ಳಿ ಭಾಗದಲ್ಲಿ ಸುಮಾರು 2ಗಂಟೆಗಳ ಕಾಲ ಜೋರು ಮಳೆಯಾಯಿತು. ಉಳಿದಂತೆ ಒಡೆಯರಪಾಳ್ಯದ ಕಡೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.’
ರೈತರಲ್ಲಿ ಮಂದಹಾಸ: ತಾಲೂಕು ವ್ಯಾಪ್ತಿಯಲ್ಲಿ ರಾಗಿ, ಮುಸುಕಿನ ಜೋಳ ಹಾಗೂ ಕಡಲೆಕಾಯಿಯನ್ನು ಹೆಚ್ಚಾಗಿ ಬಿತ್ತನೆ ಮಾಡಲಾಗಿದ್ದು, ಪೈರುಗಳು ಬಂದಿತ್ತು. ಆದರೆ 15 ದಿನಗಳ ಹಿಂದೆ ಈ ಭಾಗದಲ್ಲಿ ಮಳೆಯಾಗದ ಪರಿಣಾಮ ಪೈರುಗಳು ಒಣಗುತ್ತಿದ್ದವು. ಆದರೆ ನಾಲ್ಕೈದು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಪೈರುಗಳಿಗೆ ಜೀವಕಳೆ ಬಂದಿದ್ದರಿಂದ ರೈತರು ಕಳೆ ತೆಗೆಸುವುದರ ಜತೆಗೆ ಗೊಬ್ಬರವನ್ನು ಹಾಕಲಾಗಿತ್ತು. ಸೋಮವಾರ ಸುರಿದ ಮಳೆಗೆ ರೈತಾಪಿ ವರ್ಗದಲ್ಲಿ ಸಂತಸ ವ್ಯಕ್ತವಾಗಿದೆ.