ಶಿಕ್ಷಕರಿಗೆ ಬಿಇಒ ಸುರೇಂದ್ರ ಕಾಂಬಳೆ ಸಲಹೆ | ಕ್ಯಾದಿಗುಪ್ಪದಲ್ಲಿ ವಿಜ್ಞಾನ ಕಾರ್ಯಾಗಾರ
ಹನುಮಸಾಗರ: ವಿಜ್ಞಾನ ಕಾರ್ಯಾಗಾರಗಳು ಮಗುವಿನ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದುಕೊಳ್ಳಲು ಸಹಕಾರಿಯಾಗುತ್ತವೆ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.
ಸಮೀಪದ ಕ್ಯಾದಿಗುಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಪ್ರಯೋಗಗಳ ಮೂಲಕ ಬೋಧನೆ ಮಾಡಿದರೆ ಮಕ್ಕಳಿಗೆ ವಿಷಯ ಸರಳವಾಗಿ ಅರ್ಥವಾಗುತ್ತದೆ. ಶಿಕ್ಷಕರು ಕ್ರಿಯಾತ್ಮಕ ಚಟುವಟಿಕೆಯಿಂದ ಬೋಧನೆ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ
ಮಕ್ಕಳು ಉತ್ತಮ ಅಂಕ ಪಡೆಯುವಂತೆ ಮಾಡಬೇಕು. ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಸಂಘ-ಸಂಸ್ಥೆಗಳು
ಲ್ಯಾಬ್ ಹಾಗೂ ಸಾಮಗ್ರಿಗಳನ್ನು ದೇಣಿಗೆ ನೀಡಿರುವುದು ಶ್ಲಾಘನೀಯ. ಬೆಂಗಳೂರಿನ ಅಭ್ಯುದಯ ಸಂಸ್ಥೆ ಶಾಲೆಯ ಸ್ಟೆಮ್ ಲ್ಯಾಬ್ಗೆ 1.60 ಲಕ್ಷ ರೂ.,
ಇಳಕಲ್ನ ಕೆಎಂಸಿಎಲ್ ಸಂಸ್ಥೆ ಶಾಲೆಗೆ ಸಾಮಗ್ರಿಗಾಗಿ 2 ಲಕ್ಷ ರೂ. ದೇಣಿಗೆ ನೀಡಿರುವುದು ಶ್ಲಾಘನಾರ್ಹ ಎಂದರು.
ಅಭ್ಯುದಯ ಸಂಸ್ಥೆಯ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಮನೀಶ್ ಕೆ., ಶಾಲೆಗೆ ದೇಣಿಗೆ ನೀಡಿದ ಲ್ಯಾಬ್ ಉದ್ಘಾಟಿಸಿದರು. ಬಾಗಲಕೋಟೆಯ ಕೆಎಸ್ಎಂಸಿಎಲ್ ವಿಭಾಗೀಯ ವ್ಯವಸ್ಥಾಪಕ ಎಂ. ಪಾರ್ಥಿಬನ ಮಾತನಾಡಿದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಸವರಾಜ ವಾಲಿಕಾರ, ಡಯಟ್ ಉಪನ್ಯಾಸಕರಾದ ವಿಜಯಲಕ್ಷ್ಮೀ ಒಡೆಯರ, ರಾಜೇಂದ್ರ ಬೆಳ್ಳಿ, ಶಿಕ್ಷಣ ಸಂಯೋಜಕ ತಿಮ್ಮಣ್ಣ ಕರಿಹೋಳಿ, ಮುಖ್ಯಶಿಕ್ಷಕ ರಾಜೇಂದ್ರ ಸಿನ್ನೂರ, ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ ಶಿವನಗುತ್ತಿ ಇತರರಿದ್ದರು.