ಗುವಾಹಟಿ: ಗೋಮೂತ್ರ ಮತ್ತು ಗೋವಿನ ಸಗಣಿಯಿಂದ ಮಾರಕ ವೈರಸ್ ಕೊರೊನಾ ಗುಣವಾಗುತ್ತದೆ ಎಂದು ಅಸ್ಸಾಂನ ಅಧಿವೇಶನದಲ್ಲಿ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳಿದ್ದಾರೆ.
ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಕೊರೊನಾ ವೈರಸ್ ಬಗ್ಗೆ ಮಾತನಾಡಿದ ಶಾಸಕಿ ಸುಮನ್, ಗೋಮೂತ್ರ ಮತ್ತು ಗೋವಿನ ಸಗಣಿಗೆ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಇದೆ ಎಂದರು.
ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಣೆ ಮಾಡುತ್ತಿರುವ ವಿಷಯದ ಬಗ್ಗೆ ಅಧಿವೇಶನದಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ನಮಗೆ ಗೊತ್ತಿರುವಂತೆ ಗೋಮೂತ್ರ ಸಿಂಪಡಿಸುವ ಮೂಲಕ ಸ್ಥಳವನ್ನು ಪರಿಶುದ್ಧಗೊಳಿಸುತ್ತೇವೆ. ಅದೇ ರೀತಿ ಗೋಮೂತ್ರದಿಂದ ಕೊರೊನಾ ವೈರಸ್ನ್ನು ಗುಣ ಪಡಿಸಬಹುದು ಎಂದರು.
ಭಾರತದಲ್ಲಿ ಆಕಳನ್ನು ಪೂಜಿಸುತ್ತೇವೆ. ಅಲ್ಲದೆ ಗೋಮೂತ್ರವನ್ನು ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದಕ್ಕೆ ಭಾರತ ಸಂಸ್ಕೃತಿಯಲ್ಲಿ ಸುದೀರ್ಘವಾದ ಇತಿಹಾಸವಿದೆ.
ಸಗಣಿಯನ್ನು ಕೂಡ ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಗಳಿಗಾಗಿ, ಔಷಧಕ್ಕಾಗಿ, ಗೋಬರ್ ಗ್ಯಾಸ್ನ ಮೂಲಕ ಇಂಧನಕ್ಕಾಗಿ ಬಳಸಲಾಗುತ್ತದೆ ಎಂದರು.
ಬಾಂಗ್ಲಾದೇಶದ ಆರ್ಥಿಕತೆ ಬಲಗೊಂಡಿದ್ದಕ್ಕೆ ಭಾರತದಿಂದ ಜಾನುವಾರುಗಳ ಕಳ್ಳ ಸಾಗಣೆ ಮಾಡಿಕೊಂಡದ್ದೇ ಕಾರಣ. ಈಗ ಬಾಂಗ್ಲಾ ದೇಶವು ವಿಶ್ವದಲ್ಲಿ ದನದ ಮಾಂಸ ಮಾರಾಟಕ್ಕೆ ಎರಡನೇ ಸ್ಥಾನ ಪಡೆದಿದೆ. ಈ ಎಲ್ಲ ಜಾನುವಾರುಗಳು ಭಾರತ ದೇಶದವು. ಈ ಮೊದಲು ಇದ್ದ ಕಾಂಗ್ರೆಸ್ ಸರ್ಕಾರ ಜಾನುವಾರುಗಳ ಕಳ್ಳ ಸಾಗಣೆ ನಿಯಂತ್ರಣಕ್ಕೆ ಯಾವ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಬೇಸರಿಸಿದರು. (ಏಜೆನ್ಸೀಸ್)