ಗುರುಗುಂಟಾ: ಜಾತಿಗೆ ಸೀಮಿತವಾಗಿ ಜಯಂತಿಗಳನ್ನು ಆಚರಿಸದೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಆಚರಿಸಬೇಕು. ಅಂದಾಗ ಆಚರಣೆಗೆ ಅರ್ಥ ಬರುತ್ತದೆ ಎಂದು ಸಂಸ್ಥಾನಿಕ ರಾಜಾ ಸೋಮನಾಥನಾಯಕ ಸಲಹೆ ಮಾಡಿದರು.
ಇದನ್ನೂ ಓದಿ: ಪರಿಶಿಷ್ಟ ಜಾತಿಗೆ ಕಟುಕ ಸಮಾಜ ಸೇರಿಸಲು ಆಗ್ರಹ
ವಾಲ್ಮೀಕಿ ಸಮಾಜದಿಂದ ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಭಾರ ಎತ್ತುವ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿಗೆ ಲೇಸನ್ನು ಬಯಸಿದ ದಾರ್ಶನಿಕರು, ಸಂತರು, ಶರಣರು ಜಾತಿಗೆ ಸೀಮಿತರಾಗಿರಲಿಲ್ಲ. ಮಕ್ಕಳಿಗೆ ಸಂಸ್ಕಾರಯುತ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೊಡಿಸಿ ಎಂದರು.
ತಾಲೂಕ ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ನಂದೇಶನಾಯಕ, ಶಿಕ್ಷಕ ಅಮರೇಶ ಹುಜರತಿ ಮಾತನಾಡಿದರು. ಪ್ರಮುಖರಾದ ಅಮರೇಶ ಗುತ್ತೇದಾರ್, ರಮೇಶ ಬಸಾಪೂರ, ಮಹಮ್ಮದ್ ಇಸ್ಮಾಯಿಲ್, ವಿಜಯಕುಮಾರ ನಾಯಕ, ಅಮರೇಶ ನಾಯಕ ರತ್ನಗಿರಿ, ತಿರುಮುಲರಾವ್, ಹನುಮಂತಗೌಡ, ಪವನ್ ಕುಲಕರ್ಣಿ, ಶಿವುಅಡಿಕೆರ್, ಮಹಾಂತೇಶ ಬಿಜ್ಜಲ್, ನವೀನನಾಯಕ, ಅವಿನಾಶನಾಯಕ, ಕಾಳಪ್ಪನಾಯಕ ಇದ್ದರು.
ಕ್ವಿಂಟಾಲ್ ಸಂಗ್ರಾಣಿ ಕಲ್ಲನ್ನು ಒಂಟಿ ಕೈಯಿಂದ ಮತ್ತು ಹತ್ತಾರು ಮಣ ಭಾರದ ಉಸುಕು ತುಂಬಿದ ಚೀಲವನ್ನು ಎತ್ತುವ ಸ್ಪರ್ಧೆ ರಾತ್ರಿವರೆಗೆ ನಡೆಯಿತು. ಜಿಲ್ಲೆಯ ವಿವಿಧೆಡೆಯಿಂದ ಸ್ಪರ್ಧಾಳುಗಳು ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದರು.
ವಿಜೇತರಿಗೆ ಬೆಳ್ಳಿಕಡಗ ಮತ್ತು ನಗದುಹಣ ನೀಡಿ ಪುರಸ್ಕರಿಸಲಾಯಿತು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಕೃಷ್ಣ, ಉಸುಕು ಎತ್ತುವ ಸ್ಪರ್ಧೆಯಲ್ಲಿ ಮರಿಯಪ್ಪ ಪ್ರಥಮ ಸ್ಥಾನ ಪಡೆದರು. ಕಾರ್ಯಕ್ರಮಕ್ಕೂ ಮೊದಲು ಮಹರ್ಷಿವಾಲ್ಮೀಕಿ ಬೃಹತ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.