ತೇರದಾಳ: ಸಮೀಪದ ಸಸಾಲಟ್ಟಿ ಗ್ರಾಮ ಪಂಚಾಯಿತಿಯ ಐದನೇ ವಾರ್ಡ್ಗಾಗಿ ಭಾನುವಾರ ಉಪಚುನಾವಣೆ ನಡೆಯಿತು.
ಬೆಳಗ್ಗೆಯಿಂದ ಸುರಿಯುವ ಮಳೆಯಲ್ಲೇ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ತೇರದಾಳ ತಾಲೂಕು ಅಕ್ಷರಶಃ ಮಲೆನಾಡಿನಂತಾಗಿ ಪರಿವರ್ತನೆಯಾಗಿದೆ. ತಂಪಾದ ಗಾಳಿ ನಡುವೆ ಮಳೆ ಸುರಿಯುತ್ತಿದ್ದರೂ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಶಾಂತಿಯುತ ಮತದಾನ ನಡೆಯಿತು. ಗ್ರಾಮದ ಕ್ಷೇತ್ರಾಧಿಪತಿ ಶಿವಲಿಂಗೇಶ್ವರ ದೇವಸ್ಥಾನದ ಮೌನಯೋಗಿ ಶಂಕರಯ್ಯ ಸ್ವಾಮೀಜಿ ತಮ್ಮ ಮತ ಚಲಾಯಿಸಿದರು. ಸದರಿ ವಾರ್ಡ್ನಲ್ಲಿ 655 ಮತದಾರರಿದ್ದು, ಮಧ್ಯಾಹ್ನದ ಹೊತ್ತಿಗೆ 484 ಮತಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿ ಶ್ರೀಧರ ನಂದಿಹಾಳ ಪತ್ರಿಕೆಗೆ ತಿಳಿಸಿದ್ದಾರೆ. ಸಹ ಚುನಾವಣಾಧಿಕಾರಿಯಾಗಿ ತೇರದಾಳ ಪುರಸಭೆ ಇಂಜಿನಿಯರ್ ಸಿದ್ದಪ್ಪ ಮಾರ್ತಾಳಿ ಕಾರ್ಯನಿರ್ವಹಿಸಿದರು.