ಎನ್.ಆರ್.ಪುರ: ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಿ.ಎಚ್.ಕೈಮರ, ಯಡಗೆರೆ, ನಾಗರಮಕ್ಕಿ ರಸ್ತೆ ಹತ್ತು ವರ್ಷದಿಂದ ಡಾಂಬರು ಕಾಣದೆ ಹೊಂಡಗುಂಡಿಗಳಿಂದ ಕೂಡಿ ಸಂಚಾರ ದುಸ್ತರವಾಗಿದೆ.
ಈ ರಸ್ತೆ ಬೇರೆ, ಬೇರೆ ಗ್ರಾಮಗಳ ಮಧ್ಯ ಹಾದು ಹೋಗಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದೆ. ಬಿ.ಎಚ್.ಕೈಮರ, ಹಳ್ಳಿಬೈಲು, ಯಡಗೆರೆ, ನಾಗರಮಕ್ಕಿ ರಸ್ತೆಯಿಂದಲೂ ಗ್ರಾಮೀಣ ಭಾಗದವರಿಗೆ ಅನುಕೂಲವಾಗಿತ್ತು. ಹತ್ತು ವರ್ಷದಿಂದ ಡಾಂಬರೀಕರಣ ಮಾಡಿಲ್ಲ. ರಸ್ತೆ ದುರಸ್ತಿಗೆ ಆಗ್ರಹಿಸಿ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನಾಗರಮಕ್ಕಿ ತಿರುವಿನಲ್ಲಿ ದೊಡ್ಡ ಹೊಂಡವಾಗಿದ್ದು ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ಹೊಂಡಕ್ಕೆ ಬೀಳುವ ಅಪಾಯವಿದೆ. ಯಡಗೆರೆಯ ಒಡಗಲ್ ಎಂಬಲ್ಲೂ ರಸ್ತೆಯ ಉಬ್ಬು ಹಾಗೂ ತಿರುವಿನಲ್ಲೇ ದೊಡ್ಡ ಹೊಂಡ ಬಿದ್ದಿದೆ.
ಈ ರಸ್ತೆ ಮಲ್ಲಂದೂರು, ಹೊನ್ನೇಕೊಪ್ಪ, ಹಾತೂರು, ಬೆಳ್ಳೂರು, ಬೆಮ್ಮನೆ, ಯಡಗೆರೆ, ಕಮಲಾಪುರದಿಂದ ಎನ್.ಆರ್.ಪುರಕ್ಕೆ ಹೋಗಲು ಸುಸಜ್ಜಿತ ರಸ್ತೆಯಾಗಿತ್ತು. ಕುದುರೆಗುಂಡಿಗೆ ಹೋಗಿ ಎನ್.ಆರ್.ಪುರಕ್ಕೆ ಹೋಗುವ ಬದಲು ಹಳ್ಳಿಬೈಲು-ಕೈಮರದ ಮೂಲಕ ಹೋದಾಗ 6 ಕಿ.ಮೀ. ಕಡಿಮೆಯಾಗುತ್ತಿದೆ. ಈಗ ಹಳ್ಳಿಬೈಲು-ಕೈಮರದ ಮೂಲಕ ಹೋಗಲು ರಸ್ತೆಯಲ್ಲಿರುವ ಹೊಂಡಗಳೇ ಅಡ್ಡಿಯಾಗಿವೆ. ಇದರಿಂದ ವಾಹನ ಸವಾರರು ಈ ರಸ್ತೆ ಬಿಟ್ಟು ಮತ್ತೆ ಕುದುರೆಗುಂಡಿ ಮಾರ್ಗವಾಗಿಯೇ ಸುತ್ತಿಬಳಸಿ ಎನ್.ಆರ್.ಪುರಕ್ಕೆ ಹೋಗುತ್ತಿದ್ದಾರೆ.