ನಾಪೋಕ್ಲು: ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕ, ಮಡಿಕೇರಿ ತಾಲೂಕು ಘಟಕ ಮತ್ತು ಭಾಗಮಂಡಲ ಹೋಬಳಿ ಘಟಕದ ಸಹಯೋಗದಲ್ಲಿ ಗ್ರಾಮ ಸಿರಿ ಕಾರ್ಯಕ್ರಮ ನಡೆಸುವ ಸಂಬಂಧ ಮಂಗಳವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಮಡಿಕೇರಿ ತಾಲೂಕಿನ ಚೆಟ್ಟಿಮಾನಿಯಲ್ಲಿ ಕಾರ್ಯಕ್ರಮ ನಡೆಸುವ ಸಂಬಂದ ಇಲ್ಲಿನ ಶಾದಿ ಮಹಲ್ನಲ್ಲಿ ಪಂಚಾಯಿತಿ ಅಧ್ಯಕ್ಷ ಪೊಡನೋಳನ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಹೋಬಳಿಯ ಮೂರು ಗ್ರಾಮ ಪಂಚಾಯಿತಿಗಳಿಗೆ ಒಳಪಟ್ಟ ಶಾಲಾ-ಕಾಲೇಜುಗಳು, ಅಂಗನವಾಡಿ, ಸಂಜೀವಿನಿ ಒಕ್ಕೂಟ ಸ್ವ ಸಹಾಯ, ಸ್ತ್ರೀ ಶಕ್ತಿ ಸಂಘಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ಗ್ರಾಮ ಸಿರಿ ಕಾರ್ಯಕ್ರಮ ನಡೆಯಬೇಕಿದೆ. ಗ್ರಾಮೀಣ ಕ್ರೀಡಾಕೂಟ, ಜನಪದ ಸಾಹಿತ್ಯ ಕ್ಷೇತ್ರದ ಸಾಧಕರ ಪರಿಚಯ, ಸಾಂಸ್ಕೃತಿಕ ಕಾರ್ಯಕ್ರಮ ಒಳಗೊಂಡ ಒಂದು ದಿನದ ಕಾರ್ಯಕ್ರಮ ಇದಾಗಿದೆ. ಮಾಹಿತಿಯನ್ನು ಕ್ರೋಢೀಕರಿಸಿ ಸ್ವಾಗತ ಸಮಿತಿಯ ಗಮನಕ್ಕೆ ತಂದು ಕಿರು ಸಂಚಿಕೆ ಹೊರ ತರಬೇಕಿದೆ ಎಂದರು.
ಜ.20 ಹಾಗೂ 21 ರಂದು ಗ್ರಾಮಸಿರಿ ಕಾರ್ಯಕ್ರಮ ನಡೆಸಲು ಸಭೆ ತೀರ್ಮಾನಿಸಿತು. 20ರಂದು ಗ್ರಾಮೀಣ ಕ್ರೀಡಾಕೂಟ ಹಾಗೂ 21ರಂದು ಗ್ರಾಮಸಿರಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಭೆ ನಿರ್ಧರಿಸಿತು. ಧ್ವಜಾರೋಹಣ, ಗ್ರಾಮೀಣ ಜಾನಪದ ಕಲಾತಂಡಗಳ ಹಾಗೂ ಸ್ತಬ್ಧಚಿತ್ರಗಳ ವರ್ಣರಂಜಿತ ಮೆರವಣಿಗೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಸಾಧಕರಿಗೆ ಸನ್ಮಾನ, ಉಪನ್ಯಾಸ, ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಸ್ವಾಗತ, ಹಣಕಾಸು, ಅಲಂಕಾರ, ಮೆರವಣಿಗೆ, ಕ್ರೀಡಾ ವೇದಿಕೆ, ಆರೋಗ್ಯ ಹಾಗೂ ನೈರ್ಮಲ್ಯ, ಪ್ರಚಾರ , ಕಾನೂನು ಹಾಗೂ ಶಿಸ್ತು , ವಸ್ತು ಪ್ರದರ್ಶನ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಆಯಾ ಸಮಿತಿ ಅಧ್ಯಕ್ಷರು ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ಸಂಪೂರ್ಣ ವರದಿಯನ್ನು ಡಿ.15ರೊಳಗಾಗಿ ಸ್ವಾಗತ ಸಮಿತಿ ಅಧ್ಯಕ್ಷ ಪಾಣತಲೆ ವಿಶ್ವನಾಥ್ ಅವರಿಗೆ ಸಲ್ಲಿಸುವಂತೆ ಸಭೆ ಸೂಚಿಸಿತು.
ಕುಂದಚೇರಿ ಪಂಚಾಯಿತಿಯ ಗಡಿಭಾಗವಾದ ಕೋಡಿ ಮೊಟ್ಟೆಯಿಂದ ಚೆಟ್ಟಿಮಾನಿ ಶಾಲಾ ಮೈದಾನದವರೆಗೆ ಮೆರವಣಿಗೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಗ್ರಾಮಸ್ಥರಾದ ಮಧು ಅವರು ಊರಿನ ದೇವಸ್ಥಾನ ಐತಿಹಾಸಿಕ ಸ್ಥಳಗಳು ಹಾಗೂ ವೈಶಿಷ್ಟ್ಯ ಸಂಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಚಾರ ಕೈಗೊಳ್ಳುವಂತೆ ಇದೇ ಸಂದರ್ಭ ವಿನಂತಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಮಡಿಕೇರಿ ತಾಲೂಕು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗ್ರಾಮ ಸಿರಿ ಕಾರ್ಯಕ್ರಮದ ಬಗ್ಗೆ ಎರಡು ಸಭೆ ನಡೆದಿದ್ದು, ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಸ್ಪಂದನೆ ದೊರೆಯುತ್ತಿದೆ. ಸಮಿತಿ ರಚನೆ ಹಾಗೂ ಕಾರ್ಯಕ್ರಮದ ಬಗ್ಗೆ ಯಾವುದೇ ಗೊಂದಲ ಹಾಗೂ ಸಮಸ್ಯೆಗಳಿದ್ದಲ್ಲಿ ಪರಿಷತ್ ಬಗೆಹರಿಸಲಿದೆ. ಚೆಟ್ಟಿಮಾನಿಯಲ್ಲಿ ಇದೇ ಮೊದಲಿಗೆ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮಾದರಿಯಾಗಬೇಕು ಎಂದರು.
ಪರಿಷತ್ನ ಗೌರವ ಕಾರ್ಯದರ್ಶಿ ಪುದಿಯ ನೆರವನ ರೇವತಿ ರಮೇಶ್ ಮಾತನಾಡಿ, ಜಾನಪದ ಸೊಗಡಿನ ಗ್ರಾಮೀಣ ಕ್ರೀಡಾಕೂಟಗಳು ಈ ಕಾರ್ಯಕ್ರಮದಲ್ಲಿ ಮೂಡಿಬರಲಿ ಎಂದು ಆಶಿಸಿದರೆ, ಭಾಗಮಂಡಲ, ಅಯ್ಯಂಗೇರಿ, ಕುಂದಚೇರಿ ಪಂಚಾಯಿತಿಗೆ ಸೇರಿದ ಗ್ರಾಮಸ್ಥರನ್ನು ಸೇರಿಸಿಕೊಂಡು ಕಾರ್ಯಕ್ರಮವನ್ನು ಯಶಸ್ಸುಗೊಳಿಸಲಾಗುವುದು ಎಂದು ಪಂಚಾಯಿತಿ ಸದಸ್ಯರಾದ ಹಾರಿಸ್ ತಿಳಿಸಿದರು.
ಪಂಚಾಯಿತಿ ಅಧ್ಯಕ್ಷ ಪೊಡನೋಳನ ದಿನೇಶ್ ಮಾತನಾಡಿದರು. ಕಸಾಪ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ವಿಜೇತ ಆಪಾಡಂಡ ವೀರರಾಜ್, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೋ, ಗೌರವ ಕಾರ್ಯದರ್ಶಿಗಳಾದ ಚಲನ್ ನಿಡ್ಯಮಲೆ, ಕುದುಕುಳಿ ಇಂದಿರಾ ಭರತ್, ಪಂಚಾಯಿತಿ ಸದಸ್ಯರಾದ ಬೊಮ್ಮಿಯನ ಬಸಪ್ಪ, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಅಬ್ದುಲ್ ರಶೀದ್, ಜ್ಞಾನೋದಯ ಶಾಲಾ ಮುಖ್ಯ ಶಿಕ್ಷಕಿ ಶ್ವೇತನ್ ಚಂಗಪ್ಪ ಇತರರಿದ್ದರು.