| ವಿಶೇಷ ವರದಿ ತುಮಕೂರು
ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲೂ ಟಿಕೆಟ್ಗೆ ಪೈಪೋಟಿಯಿದೆ.
ಪಿಎಚ್ಡಿ ಪದವೀಧರರು, ವೈದ್ಯರು, ವಕೀಲರು ಹಾಗೂ ಸ್ನಾತಕೋತ್ತರ ಪದವೀಧರರ ಹೊಸಮುಖಗಳೂ ಟಿಕೆಟ್ಗೆ ಅರ್ಜಿ ಸಲ್ಲಿಸಿರುವುದು ಕಾಂಗ್ರೆಸ್ ಮಟ್ಟಿಗೆ ಹೊಸ ಬೆಳವಣಿಗೆ ಎನಿಸಿದೆ. ಇರುವ ಹನ್ನೊಂದು ಸ್ಥಾನಗಳಿಗೆ ಈವರೆಗೆ 29 ಜನ ಅರ್ಜಿ ಸಲ್ಲಿಸಿದ್ದಾರೆ.
ಡಾ.ಜಿ.ಪರಮೇಶ್ವರ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅವರ ಜತೆಗೆ ಮಾಜಿ ಶಾಸಕ ಡಾ.ರಫೀಕ್ಅಹ್ಮದ್ ತುಮಕೂರು ನಗರ ಹಾಗೂ ಮತ್ತೊಂದು ಹೊಸ ಮುಖ, ಪಿಎಚ್ಡಿ ಪದವೀಧರರಾದ ಡಾ.ಸಾಸಲು ಸತೀಶ್ ಶಿರಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.
ವೈದ್ಯರಾದ ಡಾ.ಎಸ್.ಜಿ.ಪರಮೇಶ್ವರಪ್ಪ, ಡಾ.ವಿಜಯರಾಘವೇಂದ್ರ ಚಿಕ್ಕನಾಯಕನಹಳ್ಳಿಯಿಂದ, ಡಾ.ಎಚ್.ಡಿ. ರಂಗನಾಥ್ ಕುಣಿಗಲ್ನಿಂದ, ತುಮಕೂರು ನಗರದಿಂದ ಡಾ.ಫರಾನಬೇಗಂ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದು, ನಾಲ್ವರು ವೈದ್ಯರು ಕಾಂಗ್ರೆಸ್ ಟಿಕೆಟ್ ಬಯಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಅರ್ಜಿ ಸಲ್ಲಿಸಿರುವವರ ಪೈಕಿ ವಕೀಲರ ಸಂಖ್ಯೆಯೂ ಹೆಚ್ಚಾಗಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಿರಾದಿಂದ, ಮಧುಗಿರಿಯಿಂದ ಕೆ.ಎನ್.ರಾಜಣ್ಣ, ಮಾಜಿ ಶಾಸಕ ಬಿ.ಲಕ್ಕಪ್ಪ, ಕೆಪಿಸಿಸಿ ಕಾನೂನು ಘಟಕದ ಸಿ.ಎಂ.ಧನಂಜಯ ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರದಿಂದ ಎಚ್.ನಿಂಗಪ್ಪ ಹಾಗೂ ಗುಬ್ಬಿಯಿಂದ ಪ್ರಸನ್ನಕುಮಾರ್ ಟಿಕೆಟ್ ಬಯಸಿರುವ ವಕೀಲರಾಗಿದ್ದಾರೆ.
ತಿಪಟೂರು ಕ್ಷೇತ್ರದಿಂದ ಮಾಜಿ ಶಾಸಕ ಕೆ.ಷಡಕ್ಷರಿ, ಟೂಡಾ ಶಶಿಧರ್, ಲೋಕೇಶ್ವರ್, ಕೆ.ಟಿ.ಶಾಂತಕುಮಾರ್, ತುಮಕೂರು ನಗರದಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆಮಠ್, ಇಕ್ಬಾಲ್ ಅಹ್ಮದ್, ಅತೀಕ್ ಅಹ್ಮದ್, ಟಿಕೆಟ್ ಬಯಸಿದ್ದಾರೆ.
ತುರುವೇಕೆರೆಯಿಂದ ಬಿಎಂಎಲ್ ಕಾಂತರಾಜು, ಸುಬ್ರಹ್ಮಣ್ಯ ಶ್ರೀಕಂಠಯ್ಯ, ಗುಬ್ಬಿಯಿಂದ ಹೊನ್ನಗಿರಿಗೌಡ, ಪಾವಗಡದಿಂದ ವೆಂಕಟೇಶ್, ಸೋಮ್ಲಾನಾಯಕ್, ಕೆಂಚಮಾರಯ್ಯ ಅಜಿರ್ ಸಲ್ಲಿಸಿದ್ದು ಹಾಲಿ ಶಾಸಕ ವೆಂಕಟರಮಣಪ್ಪ ನಿರೀಕ್ಷೆಯಂತೆಯೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಕೆಪಿಸಿಸಿ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಕೀಲ ಸೂರ್ಯಮುಕುಂದರಾಜ್ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವುದು ಹೊಸ ಬೆಳವಣಿಗೆ ಎನಿಸಿದೆ. ಶ್ರೀನಿವಾಸ್ ಎಂಬುವವರೂ ಇದೇ ಕ್ಷೇತ್ರ ಬಯಸಿದ್ದಾರೆ.
ವಕೀಲರು, ವೈದ್ಯರ ಜತೆಗೆ ಚಿಕ್ಕನಾಯಕನಹಳ್ಳಿಯಿಂದ ಜಿಪಂ ಮಾಜಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಜಗದೀಶ್ ಹಾಗೂ ತುಮಕೂರು ಗ್ರಾಮಾಂತರದಿಂದ ಶ್ರೀನಿವಾಸ್, ಮಧುಗಿರಿಯಿಂದ ಕೊಂಡವಾಡಿ ಚಂದ್ರಶೇಖರ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ನ.21ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇನ್ನೂ ಅರ್ಜಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಅವಶ್ಯ: ಶಿಕ್ಷಣ ತಜ್ಞ ಸಂಜಯ್ ಎಸ್. ಗೌಡ
ಬಿಎಂಟಿಸಿ ಬಸ್ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯೋಧ ಚೇತನ್ ಸಾವು, ಮುಗಿಲು ಮುಟ್ಟಿದೆ ಪಾಲಕರ ಆಕ್ರಂದನ