ಬೆಂಗಳೂರು: ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾದ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಹಿತಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಇಂಜಿನಿಯರಿಂಗ್ ಪರೀಕ್ಷೆಗೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಪ್ರೊ.ಕರಿಸಿದ್ದಪ್ಪ ಜತೆ ಚರ್ಚೆ ಮಾಡಿದ್ದೇನೆ. ಕಾನೂನು ಪರಿಮಿತಿಯಲ್ಲಿ ಈ ಸಂಬಂಧ ಯಾವ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕೋ ಅದನ್ನು ಕೂಡಲೇ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ; ಹೀಗಿರಲಿದೆ ಲಾಕ್ಡೌನ್ ನಂತರದ ನಮ್ಮ ಮೆಟ್ರೋ ರೈಲು ಸವಾರಿ? 300-350 ಜನರಿಗಷ್ಟೇ ಅವಕಾಶ
ಪರೀಕ್ಷೆಗೆ ನೀಡಲಾಗಿದ್ದ ಪ್ರಶ್ನೆಗಳಲ್ಲಿ ಬಹು ಆಯ್ಕೆಗಳನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ತಮಗಿಷ್ಟವಾದ ಪ್ರಶ್ನೆ ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಮುಕ್ತ ಅವಕಾಶ ನೀಡಲಾಗಿತ್ತು. ಹೀಗಿದ್ದರೂ ಸರ್ಕಾರ ವಿದ್ಯಾರ್ಥಿಗಳ ಹಿತ ಕಡೆಗಣಿಸುವುದಿಲ್ಲ ಎಂದು ಡಿಸಿಎಂ ಹೇಳಿದರು.
ಇದೇ ವೇಳೆ, ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆ ಉತ್ತಮವಾಗಿ ನಡೆದಿದೆ. ಶೇ.99 ವಿದ್ಯಾರ್ಥಿಗಳು ಹಾಜರಾಗಿದ್ದರು. ಕಳೆದ ವರ್ಷಗಳಲ್ಲಿ ನಡೆದ ಪರೀಕ್ಷೆಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದು ಖಂಡಿತ ಉತ್ತಮ ಪ್ರಮಾಣ ಮತ್ತು ಬೆಳವಣಿಗೆ. ಇನ್ನು ಈ ಪರೀಕ್ಷೆಗೆ ಹಾಜರಾಗದವರಿಗೆ ಕ್ಯಾರಿಓವರ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಸೆಮಿಸ್ಟರ್ ಹೊತ್ತಿಗೆ ಅವರು ಪರೀಕ್ಷೆ ಬರೆಯಬಹುದು.
ಇದನ್ನೂ ಓದಿ; ಮೂರೇ ವಾರದಲ್ಲಿ ಬ್ರಿಟನ್ ಜನರಿಗೆ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ
ಉಳಿದಂತೆ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳಿದ್ದರೆ ಅದಕ್ಕೆ ಕೃಪಾಂಕ ಕೊಡಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಅಂತಿಮ ಪರೀಕ್ಷೆ ಬರೆಯಲೇ ಬೇಕು; ಯುಜಿಸಿ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ವ್ಯಾಖ್ಯಾನವೇನು?