ಕಡೂರು: ಮರಾಠ ಅಭಿವೃದ್ಧಿ ಪ್ರಾಧಿಕಾರದ ರಚನೆಯ ಉದ್ದೇಶ ಜೇನುಗೂಡಿಗೆ ಕಲ್ಲು ಹೊಡೆದಂತೆ ಎಂಬುದನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ವೈಎಸ್ವಿ ದತ್ತ ತಿಳಿಸಿದರು.
ಮರಾಠ ಸಮುದಾಯದ ಬಗ್ಗೆ ಕನ್ನಡಿಗರಿಗೆ ದ್ವೇಷವಿಲ್ಲ. ಆ ಸಮುದಾಯದ ಬಡವರಿಗೆ ಅನುಕೂಲವಾಗುತ್ತದೆ ಎಂದರೆ ಅದಕ್ಕೆ ಯಾವುದೇ ಅಪಸ್ವರ ಇಲ್ಲ. ಆದರೆ ಈ ವಿಚಾರಕ್ಕೂ ಗಡಿ-ಭಾಗಕ್ಕೂ ನೇರ ಸಂಬಂಧ ಕಲ್ಪಿಸುತ್ತದೆ. ಬೆಳಗಾವಿ ನಮ್ಮದು ಎಂದು ಪ್ರತಿಪಾದಿಸುವ ಮಹಾರಾಷ್ಟ್ರದ ನಿಲುವನ್ನು ಕನ್ನಡಿಗರು ಒಪ್ಪಲು ಸಾಧ್ಯವಿಲ್ಲ. ಈ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಇಂತಹ ಸಮಯದಲ್ಲಿ ಮರಾಠ ಪ್ರಾಧಿಕಾರದ ರಚನೆ ಜೇನುಗೂಡಿಗೆ ಕಲ್ಲು ಹೊಡೆದಂತೆ ಎಂಬುದನ್ನು ಅರಿತು ಎಚ್ಚರಿಕೆಯ ನಡೆ ಅನುಸರಿಸಬೇಕು ಎಂದರು.
ಈಗಾಗಲೇ ಕನ್ನಡ ಪರ ಸಂಘಟನೆಗಳು ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿವೆ. ವಿಚಾರವಾದಿಗಳು, ಸಾಹಿತಿಗಳೂ ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ರಾಜ್ಯ ಬಂದ್ಗೂ ಕರೆ ನೀಡಿವೆ. ಈಗಾಗಲೇ ಗಡಿ ವಿಚಾರದಲ್ಲಿ ತಗಾದೆ ಇರುವುದರಿಂದ ಈ ಸಂದರ್ಭದಲ್ಲಿ ಯಾವುದೇ ಅವಘಡ ನಡೆದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ. ಕನ್ನಡಿಗರ ಹಿತಾಸಕ್ತಿ ಕಾಪಾಡುವ ಯಾವ ಅಂಶವು ಈ ಪ್ರಾಧಿಕಾರ ರಚನೆಯಲ್ಲಿಲ್ಲ ಎಂದು ಆರೋಪಿಸಿದರು.
ಈ ನಡುವೆ ಸರ್ಕಾರ ಇದು ಪ್ರಾಧಿಕಾರವಲ್ಲ ನಿಗಮ ಎಂಬ ಹೇಳಿಕೆ ನೀಡಿದೆ. ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕಿದೆ ಎಂದು ಆಗ್ರಹಿಸಿದರು.