ಗುರುಪುರ: ಎಡಪದವು ಗ್ರಾಮ ಪಂಚಾಯಿತಿ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಅಧ್ಯಕ್ಷ ಸುಕುಮಾರ್ ದೇವಾಡಿಗ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಮೂಡುಬಿದಿರೆ- ಮಂಗಳೂರು ಮಧ್ಯೆ ಒಂದೂ ಆಸ್ಪತ್ರೆ ಇಲ್ಲ. ಮುಚ್ಚೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನೂ ಮೇಲ್ದರ್ಜೆಗೇರಿಲ್ಲ. ತುರ್ತು ಸಂದರ್ಭ ಇಲ್ಲಿನವರು ಮೂಡುಬಿದಿರೆ ಅಥವಾ ಮಂಗಳೂರಿಗೆ ಹೋಗಬೇಕಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಎಡಪದವಿನಲ್ಲಿ ಇನ್ನಾದರೂ ಆಸ್ಪತ್ರೆ ಸ್ಥಾಪನೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಎಡಪದವು ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ಪತ್ರೆ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಶಾಸಕರೊಂದಿಗೆ ಈ ವಿಷಯ ಪ್ರಸ್ತಾವಿಸಲಾಗುವುದು ಎಂದು ಅಧ್ಯಕ್ಷ ಸುಕುಮಾರ ದೇವಾಡಿಗ ಉತ್ತರಿಸಿದರು.
70 ವಿದ್ಯಾರ್ಥಿಗಳಿರುವ ಕಣ್ಣೋರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಹಿತ ಇಬ್ಬರು ಶಿಕ್ಷಕರಿದ್ದಾರೆ. ಹೀಗಿದ್ದಾಗ ಶಾಲೆಯಲ್ಲಿ ಯಾವ ರೀತಿಯ ಶಿಕ್ಷಣ ಸಿಗಬಹುದು? ಇಲ್ಲಿನ ಮಕ್ಕಳು ಅನಿವಾರ್ಯವಾಗಿ ಬೇರೆ ಶಾಲೆಗೆ ಹೋಗುವಂತಾಗಿದೆ. ಮಕ್ಕಳಿಲ್ಲದ ಶಾಲೆ ಮುಚ್ಚುವಂತೆ ಶಿಕ್ಷಕರಿಲ್ಲದ ಶಾಲೆ ಮುಚ್ಚುವ ಸ್ಥಿತಿ ಒದಗಿ ಬರಬಹುದು. ಆದ್ದರಿಂದ ಶಾಲೆಯಲ್ಲಿ ಖಾಲಿ ಬಿದ್ದಿರುವ ಶಿಕ್ಷಕರ ಹುದ್ದೆ ಭರ್ತಿಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಶಿಕ್ಷಣ ಇಲಾಖೆ, ಶಾಸಕರು ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಗಮನಸೆಳೆದ ವಿಷಯಗಳು
ಬೀದಿನಾಯಿಗಳ ಕಾಟ, ಕ್ಷಯರೋಗ ವೃದ್ಧಿ, ಹೆದ್ದಾರಿ ಬಸ್ಗಳ ಮಿತಿ ಮೀರಿದ ವೇಗಕ್ಕೆ ನಿಯಂತ್ರಣ ಹಾಗೂ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಮೊದಲಾದ ವಿಷಯಗಳು ಗಮನಸೆಳೆದವು.
ಮಂಗಳೂರು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನೋಡಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಪ್ರೇಮಾ, ಸದಸ್ಯರು, ಪಿಡಿಒ ರಾಜೀವಿ ಡಿ.ನಾಯ್ಕ, ಮೆಸ್ಕಾಂ, ಕೃಷಿ, ಕಂದಾಯ, ಜಿಪಂ ಇಂಜಿನಿಯರಿಂಗ್ ವಿಭಾಗ ಸಹಿತ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಇಸ್ಮಾಯಿಲ್ ವರದಿ ಮಂಡಿಸಿದರು.