ಬೆಂಗಳೂರು: ಆ. 21, 22ರಂದು ಗೌರಿ-ಗಣೇಶ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಇಡೀ ಏರಿಯಾ ಇಲ್ಲವೇ ಊರಿಗೆ ಊರೇ ಒಟ್ಟುಗೂಡಿ ವಿನಾಯಕನಿಗೆ ಪೂಜೆ ಮಾಡಲು ಸಜ್ಜಾಗುವ ಮುನ್ನ ಈ ಸುದ್ದಿ ಓದಿ. ಯಾಕಂದ್ರೆ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿರುವ ಸರ್ಕಾರ ಮಹತ್ವದ ಆದೇಶ ಪ್ರಕಟಿಸಿದೆ.
ಗಣೇಶ ಹಬ್ಬಕ್ಕೆ ಇನ್ನೊಂದು ವಾರ ಇರುವಾಗಲೇ ಈ ಆದೇಶ ಹೊರಬಿದ್ದಿದ್ದು, ಸರ್ಕಾರದ ನಿಯಮ ಉಲ್ಲಂಘಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಎದುರಿಸಬೇಕಾಗುತ್ತೆ ಎಚ್ಚರ! ಹೌದು, ಮಹಾಮಾರಿ ಕರೋನಾ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ನಿಷೇಧಿಸಿದೆ. ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ದೇವಸ್ಥಾನದೊಳಗೆ ಅಥವಾ ಮನೆಯಲ್ಲಿಯೇ ಸರಳವಾಗಿ ಗಣೇಶ ಹಬ್ಬ ಆಚರಿಸಬಹದು. ಅಲ್ಲದೆ, ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳ, ನದಿ, ಕೆರೆ, ಕೊಳ, ಬಾವಿ, ಕಲ್ಯಾಣಿಗಳಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾಡುವಂತಿಲ್ಲ. ಮನೆಗಳಲ್ಲೇ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿರಿ ಅದ್ದೂರಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಬ್ರೇಕ್
ಗಣೇಶ ಹಬ್ಬ ಆಚರಣೆ ವೇಳೆ ಮೆರವಣಿಗೆ ಮಾಡುವಂತಿಲ್ಲ. ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ, ಭಕ್ತರ ನಡುವೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ಅನ್ನು ಕಡ್ಡಾಯವಾಗಿ ಧರಿಸಲೇಬೇಕು.
ಪ್ರಸ್ತುತ ರಾಜ್ಯದಲ್ಲಿ ಕರೊನಾ ಸಾಂಕ್ರಾಮಿಕ ರೋಗ ಹರಡಿರುವುದರಿಂದ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಬೇಕಾಗಿರುತ್ತದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.
ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ; ಪ್ರಮೋದ್ ಮುತಾಲಿಕ್