ಸಾಗರ: ಪಾಲಕರು ಮತ್ತು ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹದಿಂದ ಹೊರಬರಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕ್ರೀಡೆ ಹಾಗೂ ವಿದ್ಯಾರ್ಥಿ ವೇದಿಕೆಯ ವಿವಿಧ ಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಿ ಹಾಗೂ ವಾರ್ಷಿಕ ಸಂಚಿಕೆ ಕಲಾಸಾಗರ ಬಿಡುಗಡೆಗೊಳಿಸಿ ಮಾತನಾಡಿದರು.
ಎನ್ಎಸ್ಎಸ್ ಮತ್ತು ಎನ್ಸಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು ಕಲಿಸುತ್ತದೆ. ಬಹಳ ಮುಖ್ಯವಾಗಿ ಗ್ರಾಮೀಣ ಪ್ರದೇಶಕ್ಕೆ ಅವರು ತೆರಳಿದಾಗ ಅಲ್ಲಿಯ ಬದುಕು ಅವರಿಗೆ ಅರಿವಾಗುತ್ತದೆ. ಶಿಕ್ಷಣದಿಂದ ವಂಚಿತರಾಗಿ ಕೊನೆಗೆ ವ್ಯಥೆ ಪಡುವುದಕ್ಕಿಂತ ಈ ಅಮೂಲ್ಯವಾದ ಸಮಯವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇಲ್ಲಿರುವ ವಿದ್ಯಾರ್ಥಿಗಳು ಮುಂದೆ ರಾಜಕೀಯ ಕ್ಷೇತ್ರದಲ್ಲಿಯೂ ಯಶಸ್ಸು ಕಾಣುವ ಸಾಧ್ಯತೆಗಳಿರುತ್ತವೆ. ಸಮಾಜ ಸೇವೆಯಲ್ಲಿಯೂ ತೊಡಗಿಕೊಳ್ಳುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಇಲ್ಲಿಯ ವಾಚನಾಲಯ, ಇತರ ಅನುಕೂಲತೆಗಳಿಗೆ ನಾನು ಎಂದಿಗೂ ಸಹಕಾರ ನೀಡುತ್ತೇನೆ. ಕ್ರೀಡೆಗಳಲ್ಲಿ ಹಿಂದೆ ಸರಿಯದೆ ಪಾಲ್ಗೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಥಮ ಬಿಎ ವಿದ್ಯಾರ್ಥಿ ನೀಲಕುಮಾರ್ ಪ್ರದರ್ಶಿಸಿದ ಭಸ್ಮಾಸುರ ಮೋಹಿನಿ ಯಕ್ಷಗಾನ ಜನಮನ ಸೆಳೆಯಿತು. ಪ್ರಾಚಾರ್ಯ ಡಾ. ಸಣ್ಣ ಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿಷ್ಣುಮೂರ್ತಿ, ನಗರಸಭೆ ಸದಸ್ಯ ಗಣಪತಿ, ಜಗದೀಶ್ ಗೌಡ, ಜೆ.ಕೃಷ್ಣ, ಚೇತನರಾಜ್ ಕಣ್ಣೂರು, ಪರಿಮಳಾ, ಶ್ರೀಧರ್, ವೈಷ್ಣವಿ, ಆಶಾ, ಎಸ್.ಎಂ.ಗಣಪತಿ ಇತರರಿದ್ದರು.