ಗೊಳಸಂಗಿ: ಕೂಡಗಿ ಎನ್ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ಪ್ರದೇಶದಲ್ಲಿ ಪ್ರಸಕ್ತ ವರ್ಷ 50 ಸಾವಿರ ಗಿಡ ನೆಡುವ ಗುರಿ ಹೊಂದುವ ಮೂಲಕ ಪರಿಸರ ಸಂರಕ್ಷಣೆ ಜವಾಬ್ದಾರಿ ನಿರ್ವಹಿಸುತ್ತೇವೆಂದು ಮುದ್ದೇಬಿಹಾಳ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ಹೇಳಿದರು.
ಸಮೀಪದ ಕೂಡಗಿ ಎನ್ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದ ಟೌನ್ಶಿಪ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಗಾಗಿ ಅರ್ಧ ಹೆಕ್ಟೇರ್ ಪ್ರದೇಶದ ಭೂಮಿಯಲ್ಲಿ ಜಪಾನ್ ದೇಶದ ಮಾದರಿಯಲ್ಲಿ ಮೃಯಾವಾಕಿ ಜಾತಿಯ ಅಂದಾಜು 2600 ಗಿಡಗಳನ್ನು ಈಗಾಗಲೇ ನಾವು ಬೆಳೆಸುತ್ತಿದ್ದೇವೆ ಎಂದರು.
ಎನ್ಟಿಪಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜೆ. ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಥಾವರ ಇಲ್ಲಿ ಕಾರ್ಯಾರಂಭ ಮಾಡಿದಾಗಿನಿಂದಲೂ ಪರಿಸರ ಸಂರಕ್ಷಣೆಗೆ ಎನ್ಟಿಪಿಸಿ ಅಗತ್ಯ ಕ್ರಮ ಕೈಗೊಳ್ಳುತ್ತ ಬಂದು ನಿರುಪಯುಕ್ತ ಬೂದಿ ಎಲ್ಲೂ ಹಾರದ ಹಾಗೆ ಎಚ್ಚರಿಕೆ ವಹಿಸುತ್ತಿದೆ. ಆದರೂ ಕೆಲವರು ಸ್ಥಾವರದ ಹಾರುಬೂದಿಯಿಂದ ಪರಿಸರ ನಾಶವಾಗುತ್ತದೆ ಎಂಬ ವೃಥಾ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ಪ್ರೊಜೆಕ್ಟ್ ಜನರಲ್ ಮ್ಯಾನೇಜರ್ ಬಿ.ಆರ್. ರಾವ್, ಮೇಲ್ವಿಚಾರಣೆ ವಿಭಾಗದ ಜನರಲ್ ಮ್ಯಾನೇಜರ್ ಎ.ಕೆ. ತ್ರಿಪಾಠಿ, ಸಿಐಎಸ್ಎ್ ಹಿರಿಯ ಅಧಿಕಾರಿ ಒ.ಪಿ. ಚೌಧರಿ, ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎನ್. ಕಂಬಿಮಠ, ಎಂ.ಎಚ್. ಸಮಗೊಂಡ, ಎಂ.ಆರ್. ಕೊಟ್ಟಲಗಿ, ಎಂ.ಎಸ್. ನಾಗೂರ ಮತ್ತು ಎಚ್ಆರ್ ವಿಭಾಗದ ಎಜಿಎಂ ಇತರರಿದ್ದರು.