ಶಿವಮೊಗ್ಗ: ಭೂತ ಬಿಡಿಸುವ ವಿಡಿಯೋ ಚಿತ್ರೀಕರಿಸಿಕೊಂಡು ಆರ್ಎಂಎಲ್ ನಗರದ ಮದರಸಾ ಶಿಕ್ಷಕನಿಗೆ ಕಿಡಿಗೇಡಿಗಳಿಬ್ಬರು ಬ್ಲ್ಯಾಕ್ ಮೇಲ್ ಮಾಡಿ, 1.5 ಲಕ್ಷ ರೂ. ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.
ನಜ್ರುಲ್ಲಾ ರಹಮತ್ ಸಾಬ್ಮುಲ್ಲಾ ಸಂತ್ರಸ್ತ ಶಿಕ್ಷಕ. ಈತ ಮದರಸಾದಲ್ಲಿ ಶಿಕ್ಷಕನಾಗಿದ್ದು ಮಾಟ-ಮಂತ್ರವನ್ನೂ ಅರಿತಿದ್ದ ಎನ್ನಲಾಗಿದೆ. ಆತನ ಬಳಿ ಅಬೂಬಕರ್ ಅಹ್ಮದ್ ಅಲಿಯಾಸ್ ತೌಫಿಕ್ ಸಾದಿಕ್ ಮತ್ತು ಎಸ್.ಬಾಬು ಎಂಬುವರು ಒಬ್ಬರಿಗೆ ಭೂತ ಬಿಡಿಸಬೇಕು. ಅದಕ್ಕೆ ಹಣ ನೀಡುತ್ತೇವೆಂದು ಹೇಳಿದ್ದರು. ಅದರಂತೆ ಶಿಕ್ಷಕ ನಜ್ರುಲ್ಲಾ ರಹಮತ್ ಹೋಗಿ ಪ್ರಾರ್ಥನೆ ಮಾಡಿ, ಭೂತ ಬಿಡುವ ಪ್ರಯತ್ನ ಮಾಡಿ ಬಂದಿದ್ದರು.
ಒಂದು ದಿನ ಬಿಟ್ಟು ಮತ್ತೆ ಶಿಕ್ಷಕನ ಬಳಿ ಬಂದ ಅಬೂಬಕರ್ ಮತ್ತು ಬಾಬು ನೀನು ಢೋಂಗಿ ಬಾಬಾ, ನಿನ್ನ ವಿಡಿಯೋ ಮಾಡಿಕೊಳ್ಳಲಾಗಿದೆ. ಹಣ ಕೊಟ್ಟರೆ ನಿನ್ನ ವಿಡಿಯೋ ಡಿಲೀಟ್ ಮಾಡುತ್ತೇವೆ.ಇಲ್ಲವಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ನೀನು ಸಾಯುವಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಶಿಕ್ಷಕ ನಜ್ರುಲ್ಲಾ ರಹಮತ್ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.