ಗಾಂಧಿನಗರ: ದೇಶಾದ್ಯಂತ ಕರೊನಾ ಹಾವಳಿ ಕೈಮೀರಿ ಹೋಗಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಸಮಯದಲ್ಲಿ ಬೆಡ್-ಆಕ್ಸಿಜನ್ ಸಿಗದಿರುವುದು ಒಂದೆಡೆಯಾದರೆ, ಇನ್ನು ಕರೊನಾದಿಂದಾಗಿ ಸತ್ತವರ ದೇಹಗಳನ್ನು ಸುಡಲೂ ಜಾಗವಿಲ್ಲದಂತಾಗಿದೆ.
ಹೀಗೆ ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ಇಲ್ಲೊಂದು ಕಡೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಕಸ ಹಾಕುವ ಜಾಗದಲ್ಲೇ ಚಿತೆಗಳನ್ನು ಹಾಕಿ ಶವಸಂಸ್ಕಾರ ನಡೆಸಲಾಗುತ್ತಿದೆ. ಗುಜರಾತ್ನ ಗಾಂಧಿನಗರದ ನಗರ ಪಾಲಿಕೆಗೆ ಸೇರಿರುವ, ಸಬರಮತಿ ನದಿ ಪಕ್ಕದ ಸೆಕ್ಟರ್ 39ರಲ್ಲಿನ ಮಸಣದ ಪಕ್ಕದ ತಿಪ್ಪೆಗುಂಡಿಯಲ್ಲೂ ಶವಸಂಸ್ಕಾರ ನಡೆಸಲಾಗುತ್ತಿದೆ.
ಸಿಎನ್ಜಿ ಮೂಲಕ ಕಾರ್ಯನಿರ್ವಹಿಸುವ ಇಲ್ಲಿನ ಚಿತಾಗಾರಗಳು ಕೆಲವು ದಿನಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ 11 ಕಟ್ಟಿಗೆ ಚಿತಾಗಾರಗಳ ಮೂಲಕ ಶವಸಂಸ್ಕಾರ ನಡೆಸಲಾಗುತ್ತಿದೆ. ಅದಾಗ್ಯೂ ಬುಧವಾರ 8 ಶವಗಳಿಗೆ ಸಮಯಕ್ಕೆ ಸರಿಯಾಗಿ ಸಂಸ್ಕಾರ ನಡೆಸಲು ಅವಕಾಶ ಸಿಕ್ಕಿಲ್ಲ. ಇಲ್ಲಿ ದಿನವೊಂದಕ್ಕೆ 75-80 ಶವಗಳು ಬರುತ್ತಿದ್ದು, ಆ ಪೈಕಿ ಶೇ. 25 ಕರೊನೇತರ ಸಾವಿಗೆ ಒಳಗಾದಂಥವು. ಸಿಎನ್ಜಿ ಚಿತಾಗಾರ ಕೆಟ್ಟು ಸ್ಥಗಿತಗೊಂಡಿರುವುದು ಹಾಗೂ ಹತ್ತಿರದ ಸರ್ಗಾಸನ್ ಸ್ಮಶಾನದಲ್ಲಿ ಕೋವಿಡ್ ಸೋಂಕಿತ ಶವಗಳ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪಕ್ಕದ ತಿಪ್ಪೆಗುಂಡಿಯಲ್ಲಿ ಶವಸಂಸ್ಕಾರ ನಡೆಸುವ ಪರಿಸ್ಥಿತಿ ಸೃಷ್ಟಿ ಆಗಿದೆ. ಒಟ್ಟಿನಲ್ಲಿ ಕರೊನಾ ಎರಡನೇ ಅಲೆ ಗಂಭೀರವಾಗಿದ್ದು, ಆತಂಕವನ್ನು ಹೆಚ್ಚಿಸಲಾರಂಭಿಸಿದೆ. (ಏಜೆನ್ಸೀಸ್)
ರಾಜ್ಯದಲ್ಲಿ ಕರೊನಾ ಕಂಟ್ರೋಲ್ ತಪ್ಪಿದೆ, ಕೈಮುಗಿಯುವೆ ಮನೆಯಿಂದ ಯಾರೂ ಹೊರ ಬರಬೇಡಿ: ಯಡಿಯೂರಪ್ಪ
ಚಿತಾಗಾರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪೊಲೀಸ್! ಇದು ಕರೊನಾದ ಕರಾಳ ದೃಶ್ಯ
ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಬಲಿ! ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸೊಸೆ!