ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹ ಹಾಗೂ ಸಾಗಾಟ ವ್ಯವಸ್ಥೆ ಪಾಲಿಕೆ ವತಿಯಿಂದಲೇ ಮಂಗಳವಾರ ಆರಂಭವಾಗಿದೆ. ಇನ್ನು ಮುಂದೆ ತ್ಯಾಜ್ಯ ಸಂಗ್ರಹ ಮಾಡಿ ಅದನ್ನು ನಿರ್ವಹಣಾ ಘಟಕಕ್ಕೆ ಸಾಗಿಸುವ ಕಾರ್ಯವನ್ನು ಪಾಲಿಕೆಯೇ ನಿರ್ವಹಿಸಲಿದೆ.
ನೂತನ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ತ್ಯಾಜ್ಯ ಸಂಗ್ರಹ ಮತ್ತು ಸಾಗಾಟಕ್ಕಾಗಿ 108 ಜೀಪ್ ಟಿಪ್ಪರ್ಗಳು, 30 ಟಿಪ್ಪರ್ಗಳು, 16 ಕಾಂಪ್ಯಾಕ್ಟರ್ಗಳಿವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಎಂಸಿಸಿ ನೆರವಿನೊಂದಿಗೆ 28 ಕೋಟಿ ರೂ. ವೆಚ್ಚದಲ್ಲಿ ವಾಹನಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.
ಎಲ್ಲ 60 ವಾರ್ಡ್ಗಳಲ್ಲಿ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳಿಂದ ತ್ಯಾಜ್ಯ ಸಂಗ್ರಹ ಮತ್ತು ಸಾಗಾಟವನ್ನು 10 ಆರೋಗ್ಯ ನಿರೀಕ್ಷಕರು ಮೇಲ್ವಿಚಾರಣೆ ಮಾಡುತ್ತಾರೆ. ತ್ಯಾಜ್ಯ ಸಂಗ್ರಹ ವಾಹನಗಳ ಚಲನವಲನ ಪತ್ತೆಹಚ್ಚಲು ಜಿಪಿಎಸ್ ಅಳವಡಿಸಲಾಗಿದೆ. ಎಂಸಿಸಿ ಕಟ್ಟಡದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾಪಿಸಲಾದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನಿಂದ ಇದನ್ನು ಮೇಲ್ವಿಚಾರಣೆ ಮಾಡಬಹುದು ಎಂದು ಹೇಳಿದರು.
ಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಉಪಸ್ಥಿತರಿದ್ದರು. ಪಾಲಿಕೆ ವ್ಯಾಪ್ತಿಯ ಕಸ ಸಂಗ್ರಹ ಮತ್ತು ಸಾಗಾಟಕ್ಕಾಗಿ ಅನೇಕ ವರ್ಷಗಳಿಂದ ಆಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಇನ್ಮುಂದೆ ಪಾಲಿಕೆಯೇ ಸ್ವಂತದಿಂದ ಈ ಕಾರ್ಯನಿರ್ವಹಿಸಲಿದೆ.