ಗಂಗಾವತಿ: ಅಂತರ್ ಜಿಲ್ಲಾ ಸಂಪರ್ಕದ ಚೆಕ್ಪೋಸ್ಟ್ಗಳಲ್ಲಿ ತೀವ್ರ ನಿಗಾವಹಿಸಿದ್ದು, ಪ್ರವಾಸಿಗರು ಮತ್ತು ಪ್ರಯಾಣಿಕರಲ್ಲಿ ಮಾದರಿ ನೀತಿ ಸಂಹಿತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಪಂ ಇಒ ಮಹಾಂತಗೌಡ ಪಾಟೀಲ್ ಹೇಳಿದರು.
ತಾಲೂಕಿನ ಕಡೇಬಾಗಿಲು ಬಳಿಯ ಚೆಕ್ಪೋಸ್ಟ್ನಲ್ಲಿ ಪ್ರಯಾಣಿಕರಿಗೆ ನೀತಿ ಸಂಹಿತೆಯ ಬಗ್ಗೆ ಶುಕ್ರವಾರ ಜಾಗೃತಿ ಮೂಡಿಸಿ ಮಾತನಾಡಿದರು. ಆನೆಗೊಂದಿ, ಅಂಜನಾದ್ರಿ ಬೆಟ್ಟ ಸೇರಿ ಐತಿಹಾಸಿಕ ಪ್ರಸಿದ್ಧ ದೇವಾಲಯ ಮತ್ತು ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ಭೇಟಿ ಹೆಚ್ಚುತ್ತಿದ್ದು, ಚೆಕ್ಪೋಸ್ಟ್ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿ ವಾಹನ ಮತ್ತು ಪ್ರಯಾಣಿಕ ಲಗೇಜ್ಗಳನ್ನು ಪರೀಕ್ಷಿಸಬೇಕಿದ್ದು, ಪ್ರಯಾಣಿಕರು ಮತ್ತು ಪ್ರವಾಸಿಗರ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕು. ದಾಖಲೆಗಳಿಲ್ಲದ ನಗದು, ಚಿನ್ನಾಭರಣ ಮತ್ತು ಇತರ ಸಾಮಗ್ರಿ ಜಪ್ತಿ ಮಾಡಬೇಕು. ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಚೆಕ್ಪೋಸ್ಟ್ ಸಿಬ್ಬಂದಿಗೆ ಸಲಹೆ ನೀಡಿದರು. ತಾಪಂ ವಿಷಯ ನಿರ್ವಾಹಕರಾದ ಭೀಮಣ್ಣ, ಶ್ರೀನಿವಾಸ, ರಾಘವೇಂದ್ರ ಇತರರಿದ್ದರು.