ಗಂಗಾವತಿ: ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಮತ್ತು ವಿದ್ಯಾರ್ಥಿ ವೇತನ ಗೊಂದಲ ಬಗೆಹರಿಸುವಂತೆ ಒತ್ತಾಯಿಸಿ ಎಐಡಿಎಸ್ಒ ತಾಲೂಕು ಸಮಿತಿ ಶನಿವಾರ ನಗರದ ಎಸ್ಕೆಎನ್ಜಿ ಸರ್ಕಾರಿ ಪದವಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿತು.
ಜಿಲ್ಲಾ ಸಂಚಾಲಕ ಗಂಗರಾಜ್ ಅಳ್ಳಳ್ಳಿ ಮಾತನಾಡಿ, ಬಳ್ಳಾರಿ ವಿಎಸ್ಕೆ ವಿವಿ ಅಧೀನದಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ಹೆಚ್ಚಿಸಿದ್ದು, ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೂ ರಿಯಾಯಿತಿ ನೀಡುತ್ತಿಲ್ಲ. ಸರ್ಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು, ಹೆಚ್ಚುವರಿ ಶುಲ್ಕ ಪಾವತಿ ಹೊರೆಯಾಗಿದೆ. ಅದರಲ್ಲೂ ವಿದ್ಯಾರ್ಥಿ ವೇತನ ಸಕಾಲಕ್ಕೆ ಬಾರದಿದ್ದರಿಂದ ತೊಂದರೆಯಾಗಿದ್ದು, ಆರ್ಥಿಕ ಸಂಕಷ್ಟ ಉಂಟಾಗಿ ಶಿಕ್ಷಣದಿಂದ ದೂರ ಉಳಿಯುವ ಸ್ಥಿತಿ ಬಂದಿದೆ. ವಿದ್ಯಾರ್ಥಿ ವೇತನ ಬಿಡುಗಡೆಯಾಗುವರೆಗೂ ಯಾವುದೇ ಶುಲ್ಕ ವಸೂಲಿ ಮಾಡದಂತೆ ಒತ್ತಾಯಿಸಿದರು. ಪ್ರಾಚಾರ್ಯ ಡಾ.ಎನ್.ಜಿ.ಹೆಬ್ಸೂರ್ಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಅಮರೇಶ, ಪ್ರಶಾಂತ, ಗಂಗಾಧರ್ ಇತರರಿದ್ದರು.