ಗಂಗಾವತಿ: ನಗರದ ಜೆಎಸ್ ಡಿಗ್ರಿ ಕಾಲೇಜಿನಲ್ಲಿ ಗುರುವಾರ ಕುವೆಂಪು ಮುಕ್ತ ವಿವಿ ಆಯೋಜಿಸಿದ್ದ ಪದವಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವುದು ಬಯಲಾಗಿದೆ.
ವಿವಿಯಿಂದ ಬಿಎ, ಬಿಎಸ್ಸಿ, ಬಿಕಾಂ ಮತ್ತು ವಿವಿಧ ವಿಭಾಗಗಳ ಪರೀಕ್ಷೆಗಳಿಗೆ ನಗರದಲ್ಲಿ 250 ವಿದ್ಯಾರ್ಥಿಗಳು ನೋಂದಾಯಿಸಿದ್ದು, ನ.23 ರಿಂದ ಡಿ.7ರವರೆಗೆ ಎಕ್ಸಾಂಗಳನ್ನು ಆಯೋಜಿಸಲಾಗಿತ್ತು. ಇಲ್ಲಿನ ಜುಲಾಯಿನಗರದ ರುದ್ರಮ್ಮ ಬಸಪ್ಪ ಪದವಿ ಕಾಲೇಜಿನಲ್ಲಿನ ಕೇಂದ್ರಕ್ಕೆ ವಿವಿ ಅನುಮತಿ ನೀಡಿದೆ. ಆದರೆ, ಸಂಘಟಕರು ಪರೀಕ್ಷೆ ಕೇಂದ್ರವನ್ನೇ ಬದಲಿಸಿ, ಕಾಲನಿಯಲ್ಲಿರುವ ಖಾಸಗಿ ಪದವಿ ಕಾಲೇಜಿಗೆ ಸ್ಥಳಾಂತರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕನ್ನಡ ದ್ವಿತೀಯ ಭಾಷೆ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿರುವ ಬಗ್ಗೆ ಅಭ್ಯರ್ಥಿ ಪ್ರಾಣೇಶ ಎಂಬುವರು ಬಯಲು ಮಾಡಿದ್ದು, ಪರೀಕ್ಷೆ ಮೊಟಕುಗೊಳಿಸಿ ಕೇಂದ್ರದಿಂದ ಹೊರ ಬಂದಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಅಖಿಲ ಭಾರತ ಹಿಂದು ವಿದ್ಯಾರ್ಥಿ ಸಭಾ ಪದಾಧಿಕಾರಿಗಳು ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಮುಖ್ಯಸ್ಥ ಡಾ.ಚಂದ್ರಶೇಖರ್ ಮತ್ತು ಸಂಘಟಕ ಹೊನ್ನೇಶ ಅವರನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರದಲ್ಲಿ ತಪಾಸಣೆ ನಡೆಸಲು ಅವಕಾಶ ನೀಡುವಂತೆ ಪದಾಧಿಕಾರಿಗಳ ಮನವಿಗೆ ಸಂಘಟಕ ನಿರಾಕರಿಸಿದ್ದರಿಂಂದ ಕೆಲಕಾಲ ಗದ್ದಲ ಸೃಷ್ಟಿಯಾಗಿತ್ತು. ಕೇಂದ್ರದಲ್ಲಿ ಸಿಸಿ ಕ್ಯಾಮರಾ ಇಲ್ಲ, ಪೊಲೀಸ್ ನಿಯೋಜನೆ ಮಾಡಿಲ್ಲವೆಂದು ಪದಾಧಿಕಾರಿಗಳು ಕೇಂದ್ರದ ಮುಂದೆ ದಿಢೀರ್ ಪ್ರತಿಭಟನೆ ನಡೆಸಿ, ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿದರು.
ವಿವಿ ಸೂಚಿಸಿದ ಪರೀಕ್ಷೆ ಕೇಂದ್ರ ಬಿಟ್ಟು, ಬೇರೆ ಕಾಲೇಜಿನಲ್ಲಿ ಆಯೋಜಿಸಿದ್ದು ಅಪರಾಧ. ಪರೀಕ್ಷೆ ಕೇಂದ್ರದ ಬಗ್ಗೆ ಸಂಘಟಕ ಹೊನ್ನೇಶ ತಪ್ಪು ಮಾಹಿತಿ ನೀಡಿದ್ದು, ಈ ಬಗ್ಗೆ ವಿವಿಗೆ ದೂರು ನೀಡಲಾಗುವುದು.
| ಡಾ.ಚಂದ್ರಶೇಖರ್, ಪರೀಕ್ಷಾ ಕೇಂದ್ರದ ಮುಖ್ಯಸ್ಥ