ಗಂಗಾವತಿ: ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ನಿಮಿತ್ತ ತಾಲೂಕಿನ ಸಂಗಾಪುರ ಬಳಿಯ ಕಣಿವೆ ಆಂಜನೇಯ ದೇವಾಲಯದಲ್ಲಿ ದೀಪೋತ್ಸವ ಮತ್ತು ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಓಂ ಮಿನಿಸ್ಟ್ರಿ ಅಧ್ಯಕ್ಷ ಶ್ರವಣಕುಮಾರ ರಾಯ್ಕರ್ ಹೇಳಿದರು.
ನಗರದ ನಗರೇಶ್ವರ ದೇವಾಲಯದಲ್ಲಿ ಕಾರ್ಯಕ್ರಮ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜ.22 ಐತಿಹಾಸಿಕ ದಿನವಾಗಿದ್ದು, ಐದುನೂರು ವರ್ಷಗಳ ನಂತರ ದೇವಾಲಯವನ್ನು ಕಾಣುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದು ಅಸಾಧ್ಯ ಹಿನ್ನೆಲೆಯಲ್ಲಿ ಕಣಿವೆ ಆಂಜನೇಯ ದೇವಾಲಯದಲ್ಲಿ ದಿನವೀಡಿ ಕಾರ್ಯಕ್ರಮ ಆಯೋಜಿಸಿದ್ದು, ಹನುಮಾನ್ ಚಾಲೀಸ ಸಾಮೂಹಿಕ ಪಾರಾಯಣ, ರಾಮಾಯಣ ಕುರಿತು ಉಪನ್ಯಾಸ, ದೀಪೋತ್ಸವ ಇತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಕೈಗೊಳ್ಳಬೇಕಿರುವ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಚರ್ಚಿಸಲಾಯಿತು. ದೇವಾಲಯ ಸಮಿತಿ ಸದಸ್ಯ ಗೋಪಾಲಸ್ವಾಮಿ, ಪಿರಾಮಿಡ್ ಪ್ರತಿನಿಧಿ ನಾಗರಾಜ್, ಕೆಆರ್ಪಿಪಿ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸುರೇಶ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಅನ್ನಪೂರ್ಣಾ ಸಿಂಗ್, ಹೇಮಾ ಗುಲ್ದಾಳ್, ಗೀತಾ ಪಾಟೀಲ್, ಸುನೀಲ್ ಜನಾದ್ರಿ, ಶ್ರೀಧರಾಚಾರ್ಯ, ರಮಾ ದರೋಜಿ, ಸುಧಾ ಹಿರೇಮಠ, ಜಯಶ್ರೀ, ದೊಡ್ಡಬಸಮ್ಮ ಹಿರೇಮಠ, ಲಲಿತಾ ಇತರರಿದ್ದರು.