ಗಂಗಾವತಿ: ಆನೆಗೊಂದಿ ಮತ್ತು ಕನಕಗಿರಿ ಉತ್ಸವ ಆಚರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ವಿಜಯನಗರ ಸಾಮ್ರಾಜ್ಯದಲ್ಲಿ ಕನಕಗಿರಿ ಮತ್ತು ಆನೆಗೊಂದಿ ಮಹತ್ವ ಪಡೆದುಕೊಂಡಿದ್ದು, ಐತಿಹಾಸಿಕ ಸ್ಮಾರಕಗಳಾಗಿವೆ. ಹಂಪಿಗೆ ನೀಡುವ ಪ್ರಾಮುಖ್ಯತೆ ರಾಜ್ಯ ಸರ್ಕಾರ ಈ ಭಾಗಕ್ಕೆ ನೀಡುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಉತ್ಸವ ನಡೆದಿಲ್ಲ. ಹಂಪಿ ಉತ್ಸವ ದಿನ ನಿಗದಿಪಡಿಸಿರುವ ಸರ್ಕಾರ ಆನೆಗೊಂದಿ, ಕನಕಗಿರಿ ಮರೆತಿದೆ. ಉತ್ಸವಕ್ಕಾಗಿ 10 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ ನಾಮ್ಕೇವಾಸ್ತೆಯಾಗಿದೆ. ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಜಿಲ್ಲೆಯಲ್ಲಿ ಎರಡು ಉತ್ಸವ ಆಚರಿಸುವ ಮೂಲಕ ಇಲ್ಲಿನ ಸಂಸ್ಕೃತಿ, ಪರಂಪರೆ ಮತ್ತು ಕಲಾವಿದರನ್ನು ರಕ್ಷಿಸಬೇಕಿದೆ ಎಂದರು. ತಹಸೀಲ್ದಾರ್ ಯು.ನಾಗರಾಜಗೆ ಮನವಿ ಸಲ್ಲಿಸಲಾಯಿತು.
ಪದಾಧಿಕಾರಿಗಳಾದ ಹುಸೇನಸಾಬ್, ಶಂಕರ ಪೂಜಾರಿ, ಪುಂಡಲೀಕ ಬಿಸಿಲದಿನ್ನಿ, ಶರಣು ನಾಯಕ, ಉಮೇಶ ಬಂಡಿ, ಅಂಜಿನಪ್ಪ ಪೂಜಾರಿ, ಹಸೇನಸಾಬ್, ವೆಂಕಟೇಶ, ಪರಶುರಾಮ, ಭರಮಪ್ಪ, ಈರಣ್ಣ, ಹುಲುಗಪ್ಪ ಇತರರಿದ್ದರು.