ಸಂಜೀವಿನಿ ಮಾಸಿಕ ಸಂತೆ ಆಯೋಜನೆ
ಗಂಗಾವತಿ: ಗೃಹ ಕೈಗಾರಿಕೆ ಉತ್ತೇಜನಕ್ಕಾಗಿ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಗ್ರಾಪಂ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಕಾರಟಗಿ, ಕನಕಗಿರಿ ಮತ್ತು ಗಂಗಾವತಿ ತಾಲೂಕು ಮಟ್ಟದ ಸಂಜೀವಿನಿ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿದರು. ಸ್ವಹಾಯ ಗುಂಪುಗಳ ರಚನೆ ಮೂಲಕ ಸ್ವಾವಲಂಬನೆಗೆ ಒತ್ತು ನೀಡಬೇಕಿದೆ. ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡುವುದರ ಜತೆಗೆ ಮಾರುಕಟ್ಟೆಯ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಜನರ ಬಳಿ ಉತ್ಪನ್ನಗಳನ್ನು ಕೊಂಡಯ್ಯುವ ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯಿಂದ ನಾಲ್ಕು ಸ್ವಸಹಾಯ ಗುಂಪುಗಳನ್ನು ಕಳುಹಿಸಲಾಗಿದೆ. ಮಾರುಕಟ್ಟೆ ಉತ್ತೇಜನಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ತಿಂಗಳಿಗೊಮ್ಮೆ ಸಂತೆ ಆಯೋಜನೆ ಕಡ್ಡಾಯವಾಗಿದೆ. ಸರ್ಕಾರದ ಸಭೆಗಳಿಗೆ ಮತ್ತು ಸರ್ಕಾರಿ ನೌಕರರು ಸ್ವಸಹಾಯ ಗುಂಪು ಸಿದ್ಧಪಡಿಸಿದ ಉತ್ಪನ್ನಗಳನ್ನು ಖರೀದಿಸುವಂತೆ ಸೂಚಿಸಲಾಗುವುದು ಎಂದರು.