ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟ ಸೇರಿದಂತೆ ಇತರ ಸ್ಮಾರಕಗಳ ಸುತ್ತ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದ್ದು, ಅಕ್ರಮ ರೆಸಾರ್ಟ್ಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ತಾಲೂಕಿನ ಮರಳಿ ಬಳಿ ಸುಶಮೀಂದ್ರ ತಪೋವನದಲ್ಲಿ ಲಕ್ಷ್ಮೇಶ್ವರ ಶ್ರೀ ಮಂತ್ರಾಲಯ ಪಾದಯಾತ್ರೆ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿಷ್ಕಿಂಧಾ ಕ್ಷೇತ್ರದಲ್ಲಿ ಅನೈತಿಕ ಚಟುವಟಿಕೆಗಳು ನಡೆಯಬಾರದು. ಅಂತಹ ಪ್ರಕರಣ ಕಂಡು ಬಂದರೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಅನೈತಿಕ ಚಟುವಟಕೆಗಳನ್ನು ನಡೆಸುವ ರೆಸಾರ್ಟ್ಗಳಿಗೆ ಕಡಿವಾಣ ಹಾಕಬೇಕು. ಅಗತ್ಯವಾದರೆ ಈ ಬಗ್ಗೆ ಸಿಎಂ ಜತೆ ಚರ್ಚಿಸುವುದಾಗಿ ತಿಳಿಸಿದರು.