ಆರಾಳ್ದಲ್ಲಿ ಕ್ರೀಡಾಂಗಣ ಉದ್ಘಾಟನೆ
ಗಂಗಾವತಿ: ನಿರ್ದಿಷ್ಟ ಗುರಿಯಿದ್ದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ನಿರಂತರ ಪರಿಶ್ರಮವೂ ಮುಖ್ಯವಾಗಿದೆ ಎಂದು ಜಿಪಂ ಸಿಇಒ ೌಜಿಯಾ ತರನ್ನುಮ್ ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಆರಾಳ್ ಸ.ಹಿ.ಪ್ರಾ ಮತ್ತು ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಕ್ರೀಡಾಂಗಣ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಂದು ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅಗತ್ಯ ಕಾಮಗಾರಿ ಕೈಗೊಳ್ಳಲು ಯೋಜನೆಯಡಿ ಅವಕಾಶವಿದೆ. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಮೂಲಕ ಕ್ರೀಡಾಪಟುಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಡಿಸಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಓದು ಮತ್ತು ಕ್ರೀಡೆಗಳಿಗೆ ಅವಧಿ ಮೀಸಲಿಡಬೇಕಿದ್ದು, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು. ಖೋಖೋ, ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ ಆಡುವ ಮೂಲಕ ಕ್ರೀಡಾಂಗಣ ಉದ್ಘಾಟಿಸಲಾಯಿತು. ತಾಪಂ ಇಒ ಡಿ.ಮೋಹನ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಪಿಡಿಒ ಮಂಜುನಾಥ ಅಂಗಡಿ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಸಿಡಿಪಿಒ ಗಂಗಪ್ಪ ಆರೋಲಿ ಇತರರಿದ್ದರು.