ಹರಿದ್ವಾರ: ದೇಶಾದ್ಯಂತ ಲಾಕ್ಡೌನ್ ಕಾರಣದಿಂದಾಗಿ ಪ್ರಕೃತಿ ತನ್ನ ಸಹಜ ಸೊಬಗನ್ನು ಮರಳಿ ಪಡೆಯುತ್ತಿದೆ. ಹಿಂದೊಮ್ಮೆ ಅವುಗಳ ಆವಾಸಸ್ಥಾನವಾಗಿದ್ದ ಕಾಂಕ್ರೀಟ್ ಕಾಡಿನಲ್ಲಿ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ವಾಹನಗಳೇ ಇಲ್ಲದ ಹೆದ್ದಾರಿಗಳಲ್ಲಿ ಗುಂಪುಗುಂಪಾಗಿ ಬೀಡುಬಿಡುತ್ತಿವೆ. ಹೀಗಿರುವಾಗ ನದಿಗಳ ಕೂಡ ತಮ್ಮೊಡಲಲ್ಲಿದ್ದ ಕಲ್ಮಷಗಳನ್ನೆಲ್ಲ ಕಳೆದುಕೊಂಡು ಶುಭ್ರವಾಗುತ್ತಿವೆ.
ಕೆಲ ದಿನಗಳ ಹಿಂದಷ್ಟೇ, ದೆಹಲಿಯಲ್ಲಿ ಯಮುನಾ ನದಿ ಈ ಹಿಂದಿಗಿಂತಲೂ ಹೆಚ್ಚು ಸ್ವಚ್ಛವಾಗಿ ಕಂಗೊಳಿಸುತ್ತಿದೆ ಎಂದು ಹೇಳಲಾಗಿತ್ತು. ಇಡೀ ದೆಹಲಿ ಮಾಲಿನ್ಯವನ್ನು ಹೊತ್ತು ಸಾಗುತ್ತಿದ್ದ ನದಿಗೆ ಈಗ ಸೇರ್ಪಡೆಯಾಗುವ ಕೊಳಕಿನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಅಂಥದ್ದೇ ವಿದ್ಯಮಾನಕ್ಕೆ ಗಂಗಾ ನದಿಯೂ ಸಾಕ್ಷಿಯಾಗಿದೆ. ಹರಿದ್ವಾರ ಹಾಗೂ ಋಷಿಕೇಶದಲ್ಲಿ ಗಂಗಾ ನದಿಯ ನಿರು ಕುಡಿಯುವಷ್ಟರಮಟ್ಟಿಗೆ ಶುದ್ಧವಾಗಿದೆ. ಪರಿಸರ ಸಂಶೋಧಕ ಹಾಗೂ ಗುರುಕುಲ ಕಾಂಗ್ರಿ ವಿವಿಯ ನಿವೃತ್ತ ಪ್ರಾಧ್ಯಾಪಕ ಬಿ.ಡಿ. ಜೋಷಿ ಹೇಳುವ ಪ್ರಕಾರ, ಹಲವು ವರ್ಷಗಳ ಪ್ರಕಾರ ಹರಿದ್ವಾರದಲ್ಲಿ ಗಂಗಾ ನದಿ ನೀರು ಕುಡಿಯುವುದಕ್ಕೆ ಬಳಸುವ ಮಟ್ಟಿಗೆ ಶುದ್ಧವಾಗಿದೆ. ಏಕೆಂದರೆ, ನದಿಗೆ ಸೇರ್ಪಡೆಯಾಗುವ ಮಾಲಿನ್ಯಕಾರಕಗಳ ಪ್ರಮಾಣ ಕಡಿಮೆಯಾಗಿದೆ. ನೀರಿನಲ್ಲಿಯ ಟಿಡಿಎಸ್ (ಟೋಟಲ್ ಡಿಸಾಲ್ವ್ ಸಾಲಿಡ್) ಪ್ರಮಾಣ ಶೇ.500ಕ್ಕಿಂತಲೂ ಕಡಿಮೆಯಾಗಿದೆ. ಕೈಗಾರಿಕೆಗಳು, ಧರ್ಮಶಾಲೆಗಳು ಹೋಟೆಲ್, ವಸತಿಗೃಹಗಳಿಂದ ನೇರವಾಗಿ ನದಿಗೆ ಸೇರುತ್ತಿದ್ದ ಕೊಳಚೆ ಈಗ ಇಲ್ಲವಾಗಿದೆ ಎನ್ನುತ್ತಾರೆ.
ಉತ್ತರಾಖಂಡ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಖತೈತ ಹೇಳುವಂತೆ, ಗಂಗಾ ನದಿ ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸ ಗೋಚರವಾಗುವ ಮಟ್ಟಿಗೆ ಕಂಡುಬಂದಿದೆ. ಎರಡೂ ತೀರ್ಥಕ್ಷೇತ್ರಗಳಿಗೆ ಯಾತ್ರಿಕರು ಬಾರದೇ ಇರುವ ಕಾರಣ ಮಾನವ ಚಟುವಟಿಕೆಗಳಿಂದ ಈ ಪ್ರದೇಶಗಳು ಮುಕ್ತವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳುತ್ತಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಗಂಗಾನದಿ ನೀರಿನ ಗುಣಮಟ್ಟದ ಬಗ್ಗೆ ನಿಗಾ ವಹಿಸಿದೆ. ಮಂಡಳಿಯ ಅಧಿಕಾರಿ ಎಸ್.ಎಸ್. ಪಾಲ್ ಹೇಳುವಂತೆ, ಹರಿದ್ವಾರದಲ್ಲಿ ಗಂಗಾನದಿ ನೀರಿನಲ್ಲಿ ನಿಶ್ಚಿಂತೆಯಿಂದ ಸ್ನಾನ ಮಾಡಬಹುದು. ಸಂಸ್ಕರಿಸಿ ಕುಡಿಯುವುದಕ್ಕೂ ಬಳಸಬಹುದು. ಋಷಿಕೇಶದಲ್ಲಿ ಸೋಂಕು ಮುಕ್ತಗೊಳಿಸಿದರೆ ಕುಡಿಯುವುದಕ್ಕೆ ಸರಬರಾಜು ಮಾಡಬಹುದು ಎಂದು ಮಾಹಿತಿ ನೀಡುತ್ತಾರೆ. ಒಟ್ಟಿನಲ್ಲಿ ಮಾನವ ಮನೆಯಲ್ಲಿದ್ದರೆ ಪ್ರಕೃತಿಗೆ ನಿಜಕ್ಕೂ ವರದಾನ ಎನ್ನುವುದು ಇದರಿಂದ ವೇದ್ಯವಾದಂತಾಗಿದೆ.
ಹರಿದ್ವಾರ, ಋಷಿಕೇಶದಲ್ಲಿ ಕುಡಿಯುವಷ್ಟು ಶುದ್ಧವಾಯ್ತು ಗಂಗೆ: ಮಾಲಿನ್ಯಕಾರಕ ಮಾನವ ಚಟುವಟಿಕೆ ಲಾಕ್ಡೌನ್
ಕರೊನಾ ಲಾಕ್ಡೌನ್ನಿಂದ ಇಡೀ ರಾಷ್ಟ್ರವೇ ಸ್ತಬ್ಧವಾಗಿದ್ದು, ವಾಹನಗಳ ವಿರಳ ಸಂಚಾರ ಮತ್ತು ಕಾರ್ಖಾನೆಗಳ ಬಂದ್ ಮತ್ತು ಯಾತ್ರಿಗಳ ಸುಳಿವು ಇರದೇ ಇರುವುದರಿಂದ ಹರಿದ್ವಾರ ಹಾಗೂ ಋಷಿಕೇಶದಲ್ಲಿ ಗಂಗಾ ನದಿಯ ನೀರು ಕುಡಿಯುವಷ್ಟರಮಟ್ಟಿಗೆ ಶುದ್ಧವಾಗಿದೆ. https://bit.ly/3e8tvee#fitfordrinking #GangaRiver #Haridwar #Lockdown #rishikesh #Water
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 23, 2020
ಇವರ್ಯಾರು ತಬ್ಲಿಘಿಗಳಲ್ಲ, ಹಿಂದುಗಳು ಎನ್ನುವ ಫೋಟೋ ವೈರಲ್: ಫ್ಯಾಕ್ಟ್ಚೆಕ್ನಿಂದ ಬಯಲಾಯ್ತು ಸತ್ಯಾಂಶ!