ಬೆಳಗಾವಿ: ಸರ್ಕಾರದ ಮಾರ್ಗ ಸೂಚಿಯನ್ವಯವೇ ಈ ಬಾರಿ ಗಣೇಶೋತ್ಸವ ಆಚರಿಸಲು ಗಣೇಶೋತ್ಸವ ಮಹಾಮಂಡಳ, ಪೆಂಡಾಲ್ ಡೆಕೋರೇಟರ್ಸ್ ಹಾಗೂ ಮೂರ್ತಿಕಾರರು ನಿರ್ಧರಿಸಿದ್ದಾರೆ.
ನಗರದ ಸಮಾದೇವಿ ಮಂದಿರದಲ್ಲಿ ಮಂಗಳವಾರ ನಡೆದ ಗಣೇಶೋತ್ಸವ ಮಹಾಮಂಡಳ, ಪೆಂಡಾಲ್ ಡೆಕೋರೇಟರ್ಸ್, ಅಲಂಕಾರಿಕ ಮೂರ್ತಿಕಾರರ ಸಂಘಟನೆ ಪದಾಧಿಕಾರಿಗಳು ಸಭೆ ನಡೆಸಿದರು. ಕರೊನಾ ವೈರಸ್ ಹೆಸರಿನಲ್ಲಿ ಗಣೇಶೋತ್ಸವ ಆಚರಣೆ ಕೈಬಿಡುವ ಬದಲು ಸರ್ಕಾರದ ಮಾರ್ಗಸೂಚಿ ಅಳವಡಿ ಸಿಕೊಂಡು ಆಚರಣೆ ಮಾಡಲು ಒಮ್ಮತದ ನಿರ್ಧಾರ ಕೈಗೊಂಡರು.
ಆಚರಣೆಗೆ ಒಲವು: ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ವಿಜಯ ಜಾಧವ್ ಮಾತನಾಡಿ, ಕರೊನಾ ವೈರಸ್ನಿಂದ ಇಡೀ ವಿಶ್ವ ಸಂಕಷ್ಟದಲ್ಲಿದೆ. ಆದರೆ, ಗಣೇಶೋತ್ಸವ ಸಂಪ್ರದಾಯ ಬಿಡಬಾರದೆಂಬ ಅಭಿಪ್ರಾಯ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲರ ಒಪ್ಪಿಗೆಯಂತೆ ದೈಹಿಕ ಅಂತರ ಕಾಯ್ದುಕೊಂಡು ಗಣೇಶೋತ್ಸವ ಆಚರಿಸೋಣ ಎಂದರು. ಮೂರ್ತಿ ತಯಾರಕರ ಸಂಘದ ಮುಖಂಡ ಮನೋಹರ ಪಾಟೀಲ ಮಾತನಾಡಿ, ಗಣೇಶೋತ್ಸವಕ್ಕೆಂದು ಮೂರ್ತಿ ಸಿದ್ಧಪಡಿಸುವ ಕೆಲಸ ನಡೆದಿದೆ. ಎಲ್ಲರ ಒಪ್ಪಿಗೆಯಂತೆ ಗಣೇಶೋತ್ಸವ ಆಚರಣೆ ನಿರ್ಧಾರ ಕೈಗೊಳ್ಳೋಣ ಎಂದರು. ಪೆಂಡಾಲ್ ಅಸೋಸಿಯೇಷನ್ ಸಂಘದ ನಾರಾಯಣ ಚೌಗುಲೆ, ಮಹೇಶ ದಳವಿ, ಹೇಮಂತ ಹಾವಳ ಇತರರು ಇದ್ದರು.
ಎಚ್ಚರಿಕೆ ಅತ್ಯಗತ್ಯ: ಸಭೆಯಲ್ಲಿ ಪಾಲ್ಗೊಂಡು ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ, ಕರೊನಾ ಸೋಂಕು ವ್ಯಾಪಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ಗಣೇಶೋತ್ಸವವನ್ನು ಸರಳ, ಸಂಕ್ಷಿಪ್ತವಾಗಿ ಆಚರಣೆಗೆ ಆದ್ಯತೆ ನೀಡಬೇಕು. ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಕಡ್ಡಾಯವಾಗಬೇಕು. ಗಣೇಶೋತ್ಸವದ ವಿಚಾರವಾಗಿ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.