ಮೈಸೂರು: ಕುಖ್ಯಾತ ನರಹಂತಕ, ದಂತಚೋರ ವೀರಪ್ಪನ್ ಹಾರಿಸಿದ ಗುಂಡು ತಗುಲಿ ಕೈ ಕೆಳೆದುಕೊಂಡ ವ್ಯಕ್ತಿ ಈಗ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಬಿಆರ್ ಹಿಲ್ಸ್ ಸಮೀಪದ ಪುನಜನೂರು ನಿವಾಸಿ ಗಫಾರ್ ಈ ರೀತಿ ಕೈ ಕಳೆದುಕೊಂಡ ವ್ಯಕ್ತಿ.
ಗಫಾರ್ಗೆ ಈಗ 65 ವರ್ಷ ವಯಸ್ಸು. ಗಫಾರ್ ಹೇಳುವ ಪ್ರಕಾರ 1996ರ ಆಗಸ್ಟ್ 9ರಂದು ವೀರಪ್ಪನ್ ಗುಂಡಿನ ದಾಳಿ ನಡೆಸಿದ್ದ. ಆ ಘಟನೆಯನ್ನು ಗಫಾರ್ ಮಾಧ್ಯಮವೊಂದಕ್ಕೆ ವಿವರಿಸಿದ್ದು ಹೀಗೆ- 1996ರ ಆಗಸ್ಟ್ 9ರಂದು ಗ್ರಾಮದಲ್ಲಿರುವ ಮನೆಗೆ ತಮಿಳುನಾಡಿನವರು ಇಬ್ಬರು ಆಗಮಿಸಿದ್ದರು. ತಮ್ಮನ್ನು ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. ಅವರನ್ನು ಮನೆಯ ವರಾಂಡದಲ್ಲಿ ಕುಳ್ಳಿರಿಸಿ ಒಳಗೆ ಹೋಗುತ್ತಿದ್ದ ವೇಳೆ ದಿಢೀರ್ ಮನೆ ಬಳಿ ಕಾಣಿಸಿಕೊಂಡಿದ್ದ ವೀರಪ್ಪನ್, ತನ್ನ ಎಸ್ಎಲ್ಆರ್ ಗನ್ ಮೂಲಕ ದಾಳಿ ನಡೆಸಿದ್ದ. ಬುಲೆಟ್ಗಳು ಭುಜ ಮತ್ತು ಬೆರಳುಗಳಿಗೆ ತಾಗಿದ್ದವು. ಕೂಡಲೇ ಬೋರಲು ಬಿದ್ದು ಉಸಿರು ಬಿಗಿ ಹಿಡಿದು ಮಲಗಿದ ಕಾರಣ ಬದುಕಿ ಉಳಿದೆ.
ಇದನ್ನೂ ಓದಿ: 31ರ ತನಕ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ
ದಾಳಿ ನಡೆಸಿದ ಬಳಿಕ ವೀರಪ್ಪನ್ ಗ್ಯಾಂಗ್ ಅಲ್ಲಿಂದ ಮಾಯವಾಗಿತ್ತು. ಕೂಡಲೇ ನನ್ನನ್ನು ಕೆ.ಆರ್.ಹಾಸ್ಪಿಟಲ್ಗೆ ದಾಖಲಿಸಲಾಗಿತ್ತು. ಸರ್ಕಾರವೇ ನನ್ನ ಆಸ್ಪತ್ರೆ ಬಿಲ್ಗಳನ್ನು ಪಾವತಿಸಿತ್ತು. ಅಲ್ಲಿಂದ ಬಂದ ನಂತರದಲ್ಲಿ ಸಣ್ಣ ವ್ಯಾಪಾರ ಆರಂಭಿಸಿ ಬದುಕು ಕಟ್ಟಲು ಪ್ರಯತ್ನಿಸಿದೆ. ಆದರೆ ಹೆಚ್ಚೇನೂ ಸಾಧಿಸಲಾಗಲಿಲ್ಲ. ಕೈ ಸಮಸ್ಯೆ ಇದ್ದ ಕಾರಣ ಶ್ರಮದ ಕೆಲಸ ಸಾಧ್ಯವಾಗಲಿಲ್ಲ. ಈಗ ವಯಸ್ಸಾಗಿದೆ. ಆರೋಗ್ಯವೂ ಸರಿ ಇಲ್ಲ. ಈಗ 1,200 ರೂಪಾಯಿ ಪಿಂಚಣಿ ಮತ್ತು ಉಚಿತ ಬಸ್ ಇದೆ. ಅಷ್ಟಿದ್ದರೆ ಬದುಕು ಸಾಗುವುದಿಲ್ಲವಲ್ಲ.
ನನ್ನ ಹೃದ್ರೋಗದ ಚಿಕಿತ್ಸೆಗೆಂದೇ 25,000 ರೂಪಾಯಿ ಸಾಲ ಮಾಡಿಕೊಂಡೆ. ಈಗ ಕೋವಿಡ್ ಬೇರೆ ಇದೆ. ಎಲ್ಲೂ ಹೋಗಲಾಗುತ್ತಿಲ್ಲ. ನನ್ನ ಪತ್ನಿ ಫಾತಿಮಾಬೀ ಗೂ ಮಧುಮೇಹವಿದೆ. ಅನೇಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹಾಯ ಮಾಡುತ್ತಿದ್ದಾರೆ. ನಮಗೂ ಅದೇ ರೀತಿ ನೆರವು ನೀಡಿದ್ದರೆ ಬದುಕಿಕೊಳ್ಳುತ್ತಿದ್ದೆವು ಎಂದು ಕಣ್ಣೀರು ಹಾಕಿದ್ದಾರೆ. (ಏಜೆನ್ಸೀಸ್)