ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಘಾಟಿ ದನಗಳ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಘಾಟಿ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ದನಗಳ ಜಾತ್ರೆ ಆರಂಭವಾಗಿದ್ದು, ಸಾವಿರಾರು ಜಾನುವಾರುಗಳು ಜಮಾವಣೆಯಾಗಿವೆ. ಘಾಟಿ ದೇಗುಲ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದಿಂದ ದನಗಳ ಜಾತ್ರೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ.
8 ಲಕ್ಷ ರೂ.ವರೆಗೆ ಮಾರಾಟ:
ಬರಗಾಲ, ಕರೊನಾ ಮಾರಿ ಸೇರಿ ಅನೇಕ ಸಂಕಷ್ಟಗಳ ನಡುವೆಯೂ ದನಗಳ ಜಾತ್ರೆ ಅದ್ದೂರಿಯಾಗಿಯೇ ಆರಂಭವಾಗಿದೆ. ನೆರೆಯ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮಗನರ ಸೇರಿ ಆಂಧ್ರ ಹಾಗೂ ತಮಿಳುನಾಡಿನ ಹೊಸೂರು ಕಡೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ದನಗಳು ಜಮಾವಣೆಯಾಗಿವೆ. ದನಗಳ ವ್ಯಾಪಾರ ಭರದಿಂದ ಸಾಗಿದೆ, ಜೋಡೆತ್ತುಗಳಿಗೆ 8 ಲಕ್ಷ ರೂ.ವರೆಗೆ ದರ ನಿಗದಿಯಾಗಿರುವುದು ಕಂಡುಬರುತ್ತಿದೆ.
ಮೂಲಸೌಕರ್ಯಕ್ಕೆ ಒತ್ತು:
ದೇವಾಲಯ ಆಡಳಿತ ಮಂಡಳಿ ಜಾತ್ರೆಗೆ ಬೇಕಾಗಿರುವ ವ್ಯವಸ್ಥೆಗಳನ್ನು ಉಚಿತವಾಗಿ ಮಾಡಿದೆ. ಪಶು ಆಸ್ಪತ್ರೆ, ದನಗಳಿಗೆ ಬೇಕಾಗಿರುವ ನೀರಿನ ತೊಟ್ಟಿಗಳು, ವಿದ್ಯುತ್ ಸೌಕರ್ಯ, ಉಚಿತವಾಗಿ ಅನ್ನಸಂಪರ್ಪಣೆ ಮತ್ತಿತರ ಸೌಲಭ್ಯ ಕಲ್ಪಿಸಲಾಗಿದೆ.
ಸಂಘಟನೆಯ ಸಮಾಜಸೇವೆ:
ದೊಡ್ಡಬಳ್ಳಾಪುರದಲ್ಲಿ ಕ್ರಿಯಾಶೀಲ ಸಂಘಟನೆಯಾಗಿರುವ ನವ ಕರ್ನಾಟಕ ಯುವ ಶಕ್ತಿ ವೇದಿಕೆಯಿಂದ ಘಾಟಿ ದನಗಳ ಜಾತ್ರೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ನೀರನ್ನು ಉಚಿತವಾಗಿ ಪೂರೈಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಡಿ.26 ರಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರಗಳಿಗೆ ಉಚಿತವಾಗಿ ಮೇವು ಮತ್ತು ನೀರು ಪೂರೈಸುವ ಮೂಲಕ ರೈತ ಸಮುದಾಯವನ್ನು ಬೆಂಬಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ವೇದಿಕೆ ಅಧ್ಯಕ್ಷ ಎಚ್.ಸಿ.ಅಂಬರೀಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7259429132 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.