ಬಳ್ಳಾರಿ: ಪೌರತ್ವ ತಿದ್ದಪಡಿ ಕಾಯ್ದೆ ಪರ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮುಸ್ಲಿಂ ಸಮುದಾಯದಿಂದ, ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಇಂದು ತಮ್ಮ ಮಾತುಗಳಿಗೆ ಸಮರ್ಥನೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿತ್ತು. ಹಾಗಾಗಿ ನನಗೆ ತುಂಬ ಬೇಜಾರಾಗಿ ಹಾಗೆ ಹೇಳಿದೆ ಎಂದಿದ್ದಾರೆ.
ಈ ಕಾಯ್ದೆಯಿಂದ ಯಾರಿಗೂ ತೊಂದರೆಯಿಲ್ಲ. ಕಾಂಗ್ರೆಸ್ನವರು ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆಸ್ತಿಪಾಸ್ತಿ ಹಾನಿಯಾಗೋದು ಯಾರಿಗೂ ಶೋಭೆಯಲ್ಲ. 13, 800 ಕೋಟಿ ಆಸ್ತಿ ಹಾನಿಯಾಗಿದ್ದಕ್ಕೆ ನನಗೆ ಆಕ್ರೋಶ ಉಂಟಾಯಿತು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ನಾನು ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿಲ್ಲ. ನಾನು ಸತ್ತರೆ ಸ್ಮಶಾನದಲ್ಲಿ ಹೂಳುತ್ತಾರೆ, ನೀವು ಸತ್ತರೆ ಖಬರಸ್ತಾನ್ನಲ್ಲಿ ಹೂಳುತ್ತಾರೆ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದಿದ್ದೇವೆ. ಇಲ್ಲೇ ಸಾಯುತ್ತೇವೆ. ದೇಶದ ಯಾವೊಬ್ಬ ನಾಗರಿಕನಿಗೂ ಕಾಯ್ದೆಯಿಂದ ತೊಂದರೆಯಾಗೋದಿಲ್ಲ. ಕಾಂಗ್ರೆಸ್ನವರು ಹೇಳುತ್ತಾರೆಂದು ನೀವು ಬಂದಿರಿ. ಅವರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಮತ್ತು ಮುಸ್ಲಿಂ ಸಮುದಾಯದವರು ಸೋದರರಂತೆ ಇದ್ದೇವೆ ಎಂದಿದ್ದಾರೆ.