ಶಿವಮೊಗ್ಗ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ನಮ್ಮ ವಿದ್ಯಾರ್ಥಿಗಳನ್ನು ನಾವು ಇಂದು ಜಾಗತಿಕ ಮಟ್ಟದಲ್ಲಿ ರೂಪಿಸಬೇಕಾಗಿದೆ ಎಂದು ಎಂಎಲ್ಸಿ ಡಿ.ಎಸ್.ಅರುಣ್ ಹೇಳಿದರು.
ಹಳೆಯ ಕಾಲದ ಶಿಕ್ಷಣ ಪದ್ಧತಿ ಈಗ ನಮಗೆ ಬೇಕಿಲ್ಲ. ರಾಜ್ಯ ಶಿಕ್ಷಣ ಸಮಿತಿಯು ನೀಡುವ ಅಳವಡಿಕೆ ಕೇವಲ ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾತ್ರವೇ ಸೀಮಿತವಾಗುವುದರಿಂದ ಉಳ್ಳವರಿಗೆ ಎನ್ಇಪಿ ಶಿಕ್ಷಣವಾದರೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಸ್ಇಪಿ ಎನ್ನುವ ಎರಡು ವರ್ಗದ ಸೃಷ್ಟಿಯೇ ರಾಜ್ಯ ಸರ್ಕಾರದ ಈ ನಿರ್ಧಾರ ಕಾರಣವಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎನ್ಇಪಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿದರೆ, ಬಹುತೇಕ ಎಲ್ಲ ಖಾಸಗಿ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಸಿಬಿಎಸ್ಇಗೆ ಬದಲಾವಣೆಯಾಗುತ್ತಾರೆ. ಆದರೆ ಬಡ ಮಕ್ಕಳು ಈ ಸಿಬಿಎಸ್ಇಗೆ ಹೋಗುವುದಾದರು ಹೇಗೆ, ಶಿಕ್ಷಣ ಕಲಿಯುವುದಾದರೂ ಹೇಗೆ. ರಾಜ್ಯ ಸರ್ಕಾರ ಬಡವರ ಮಕ್ಕಳು ಹೆಚ್ಚು ಓದಬಾರದು, ಶಿಕ್ಷಣ ಕಲಿಯಬಾರದು ಎಂದುಕೊಂಡಂತಿದೆ. ಬಡ ವಿದ್ಯಾರ್ಥಿಗಳ ಜ್ಞಾನ ದಾಹಕ್ಕೂ ಇದು ಕಂಟಕವಾಗುತ್ತದೆ ಎಂದರು.
ಸಹಿ ಸಂಗ್ರಹ ಅಭಿಯಾನ
ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎನ್ಇಪಿಯನ್ನು ರದ್ದುಗೊಳಿಸಬಾರದು ಮತ್ತು ಮುಂದುವರಿಸಬೇಕು. ಹಾಗಾಗಿ ನಾವು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನದ ಮೂಲಕ ಜನಭಿಪ್ರಾಯ ಮೂಡಿಸುತ್ತಿದ್ದೇವೆ. ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ನಮ್ಮ ವೇದಿಕೆ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿದೆ ಎಂದು ಡಿ.ಎಸ್.ಅರುಣ್ ಹೇಳಿದರು. ಇದರಲ್ಲಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳೂ ಇದ್ದಾರೆ. ಆದ್ದರಿಂದ ಎನ್ಇಪಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಒತ್ತಾಯಿಸಿದರು.