ಇಟಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧ್ಯಾತ್ಮದ ಸಿಂಚನದ ಮೂಲಕ ಸನ್ಮಾರ್ಗದಲ್ಲಿ ಸಾಗುವಂತೆ ಮಾಡಿದ ಕೀರ್ತಿ ಬ್ರಹ್ಮಲೀನ ಸದಾಶಿವಾನಂದ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರ ಸ್ವಾಮೀಜಿ ಹೇಳಿದರು.
ಸಮೀಪದ ಚಿಕ್ಕಮುನವಳ್ಳಿ ಆರೂಢ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 44ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ಹಾಗೂ ಬ್ರಹ್ಮಲೀನ ಸದಾಶಿವಾನಂದ ಶ್ರೀಗಳ 14ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮರು ನಾಡಿಗೆ ಸಲ್ಲಿಸಿದ ಸೇವೆಯನ್ನು ಇಂದಿನ ಜನಾಂಗ ಸ್ಮರಿಸಿ ಅವರು ಹಾಕಿಕೊಟ್ಟ
ಸನ್ಮಾರ್ಗದಲ್ಲಿ ನಡೆಯುವುದೇ ಸ್ಮರಣೋತ್ಸವದ ಮೂಲ ಉದ್ದೇಶ ಎಂದರು. ಬೆಳಗಾವಿ ಗುರುಕುಲದ ಗುರುಬಸವ ಸ್ವಾಮೀಜಿ ಮಾತನಾಡಿ, ನಾಡಿಗೆ ಬಸವಾದಿ ಶರಣರು ಹಾಕಿಕೊಟ್ಟ ಕಾಯಕ ಮತ್ತು ದಾಸೋಹ ತತ್ತ್ವಗಳನ್ನು ಇಂದಿನ ಸಮಾಜಕ್ಕೆ ತಿಳಿಸುವಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮದ ಅವಶ್ಯ ಎಂದರು.
ಬೇವಿನಕೊಪ್ಪ ನಿತ್ಯಾನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲಿಂಗಾನಂದ ಭಾರತಿ ಸ್ವಾಮೀಜಿ, ಇಟಗಿ ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ, ಖಂಡೂಬಾ ಹೈಬತ್ತಿ, ವಿಠ್ಠಲ ಪದ್ಮಪ್ಪನವರ, ಬಿಷ್ಟಪ್ಪ ಬನೋಶಿ, ರುದ್ರಯ್ಯಸ್ವಾಮಿ ಹಿರೇಮಠ, ಮಂಜಯ್ಯ ಸ್ವಾಮಿ ಹಿರೇಮಠ, ವೀರೇಶ ಕಂಬಳಿ, ಕಲ್ಲಪ್ಪ ಸರದಾರ ಇತರರು ಇದ್ದರು.