ನಿಪ್ಪಾಣಿ: ಕರೊನಾ ವೈರಸ್ ನಿಯಂತ್ರಿಸಲು ಲಾಕ್ಡೌನ್ ಅಗತ್ಯವಿರುವುದರಿಂದ ತಾಲೂಕನ್ನು ಜು. 15ರಿಂದ ಜು. 22ರವರೆಗೆ ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಕೋವಿಡ್-19 ನಿಯಂತ್ರಿಸುವ ಕುರಿತು ಶನಿವಾರ ಜರುಗಿದ ಅಧಿಕಾರಿಗಳ, ವ್ಯಾಪಾರಸ್ಥರ ಹಾಗೂ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು. ಜು. 13 ಮತ್ತು 14 ರಂದು ಅಗತ್ಯ ವಸ್ತುಗಳನ್ನು, ಆಹಾರ ಸಾಮಗ್ರಿಗಳನ್ನು ಸುಮಾರು 8-10 ದಿನಗಳವರೆಗೆ ಆಗುವಷ್ಟು ಖರೀದಿಸಬೇಕು. ಮಾಸ್ಕ್ ಧರಿಸದೇ ಸಂಚರಿಸುವವರಿಗೆ, ಅಂತರ ಕಾಯ್ದುಕೊಳ್ಳದಿರುವವರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು. ಕಳೆದ ನಾಲ್ಕು ತಿಂಗಳಿಂದ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಬಿಡಲಾಗಿದೆ. ಕರೊನಾ ಮುಕ್ತಗೊಳಿ ಸುವುದು ನಮ್ಮ ಉದ್ದೇಶ ಎಂದರು. ಅತೀ ಅವಶ್ಯದ ಸಂದರ್ಭದಲ್ಲಿ ಆಂಬುಲೆನ್ಸ್ ಇದ್ದೇ ಇರುತ್ತದೆ. ಮತ್ತೊಂದು ವಾಹನದ ವ್ಯವಸ್ಥೆಯನ್ನೂ ಮಾಡಲಾಗುವುದು. ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ಸಮಿತಿ ರಚಿಸಿದಂತೆ ನಗರದ ಪ್ರತಿ ವಾರ್ಡ್ಗಳಲ್ಲೂ
ಟಾಸ್ಕ್ಫೋರ್ಸ್ ಸಮಿತಿಗಳನ್ನು ರಚಿಸಲಾಗುವುದು. ಕೊಗನೋಳಿ ಚೆಕ್ಪೋಸ್ಟ್ ಮತ್ತಷ್ಟು ಬಿಗಿಗೊಳಿಸಲಾಗುವುದು. ಹೊರಗಿನಿಂದ ಬಂದವರ ಕುರಿತು ಟಾಸ್ಕ್ಫೋರ್ಸ್ ಸಮಿತಿಗೆ ಕೂಡಲೇ ತಿಳಿಸಬೇಕು ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲಾಕ್ಡೌನ್ ಅವಧಿಯಲ್ಲಿ ಕೇವಲ ವೈದ್ಯಕೀಯ ಸೇವೆ ಮಾತ್ರ ಆರಂಭವಿರಲಿದೆ.
ಕೇವಲ ಸರ್ಕಾರ ಕಾಳಜಿ ವಹಿಸಿದರೆ ಸಾಲದು. ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಲ್ಲರೂ ಲಾಕ್ಡೌನ್ಗೆ ಸಹಕರಿಸಿ ಎಂದರು. ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿದರು. ಹಾಲಶುಗರ್ಸ್ ಸಂಚಾಲಕ ಪಪ್ಪು ಪಾಟೀಲ, ಸ್ಥಳೀಯ ನಗರಸಭೆ ಪೌರಾಯುಕ್ತ ಮಹಾವೀರ ಬೋರಣ್ಣವರ, ಸುರೇಶ ಶೆಟ್ಟಿ, ರಾಜ ಪಠಾಣ, ಪ್ರಣವ ಮಾನವಿ, ಅಭಯ ಮಾನವಿ, ಸೋನಲ್ ಕೋಠಾಡಿಯಾ, ಪತ್ರಕರ್ತ ರಾಜೇಶ ಶೇಡಗೆ, ಮಹೇಶ ಶಿಂಪುಕಡೆ, ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ, ಸಿಪಿಐ ಸಂತೋಷ ಸತ್ಯನಾಯಿಕ್ ಇತರರು ಇದ್ದರು.