ಬೆಂಗಳೂರು: ಇದೇ ಮೊದಲ ಬಾರಿಗೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಹೊಸೂರು ರೈಲು ನಿಲ್ದಾಣದಿಂದ ಬಾಂಗ್ಲಾದೇಶದ ಬೆನಪೊಲೆ ರೈಲು ನಿಲ್ದಾಣಕ್ಕೆ ವಾಣಿಜ್ಯ ಸರಕು ಸಾಗಣೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ.
ಹೊಸೂರು ರೈಲ್ವೆ ನಿಲ್ದಾಣದಲ್ಲಿ 25 ವ್ಯಾಗನ್ನಲ್ಲಿ ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿದ 100 ಲು ವಾಣಿಜ್ಯ ವಾಹನಗಳನ್ನು ಹೊತ್ತ ಸರಕು ಸಾಗಣೆ ರೈಲಿಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಮಂಗಳವಾರ ಹಸಿರು ನಿಶಾನೆ ತೋರಿದರು. ನೂತನ ರೈಲು ಹೊಸೂರು ರೈಲು ನಿಲ್ದಾಣದಿಂದ 2,121 ಕಿ.ಮೀ. ದೂರದಲ್ಲಿನ ಬಾಂಗ್ಲಾದೇಶದ ಬೆನಪೊಲೆ ರೈಲು ನಿಲ್ದಾಣಕ್ಕೆ ಸರಕುಗಳನ್ನು ಹೊತ್ತು ರೈಲು ತೆರಳಲಿದೆ.
ನೈಋತ್ಯ ರೈಲ್ವೆ ಈ ಹಿಂದೆ ಪೆನಗೊಂಡ ರೈಲು ನಿಲ್ದಾಣದಿಂದ ನೇಪಾಳದ ನೌಟ್ನವಾಗೆ ಎರಡು ಸರಕು ಸಾಗಣೆ ರೈಲು ಕಾರ್ಯಾಚರಣೆ ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ದೇಶ ಹಾಗೂ ಹೊರ ದೇಶದ ವಿವಿಧ ಸ್ಥಳಗಳಿಗೆ 128 ಸರಕು ಸಾಗಣೆ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗಿದೆ.
ಆಟೋಮೊಬೈಲ್ ಸರಕುಗಳ ಸಾಗಣೆಗೆ ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ಸಾರಿಗೆ ಸುರಕ್ಷಿತ ಹಾಗೂ ಸುಲಭದ್ದಾಗಿದೆ. ಅಲ್ಲದೆ, ನಿಗದಿತ ಸಮಯಕ್ಕೆ ಸರಕು ತಲುಪುವ ಬಗ್ಗೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಹೇಳಿದರು.
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಎ.ಎನ್.ಕೃಷ್ಣಾ ರೆಡ್ಡಿ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಅಖಿಲ್ ಎಂ.ಶಾಸಿ, ಅಶೋಕ ಲೇಲ್ಯಾಂಡ್ ಉಪಾಧ್ಯಕ್ಷ ರಾಕೇಶ್ ಮಿತ್ತಲ್ ಸೇರಿ ಇನ್ನಿತರರಿದ್ದರು.