ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ರೋಟರಿ ಸ್ಕೂಲ್ ಹಾಗೂ ಸವಾಯಿ ಗಂಧರ್ವ ಹಾಲ್ ಆವರಣಗಳು ಭಾನುವಾರ ಸುಡು ಬಿಸಿಲಿನಲ್ಲೂ ಸಂಪೂರ್ಣ ಮಕ್ಕಳಮಯವಾಗಿದ್ದವು. ಬೆಳಗ್ಗೆಯಿಂದ ಸಂಜೆಯವರೆಗೆ ಒಂದಿಲ್ಲೊಂದು ಆಟದಲ್ಲಿ ತೊಡಗಿದ ಚಿಣ್ಣರ ಕಲರವ ಎಲ್ಲರ ಹುಮ್ಮಸ್ಸು ಹೆಚ್ಚಿಸಿತು. ಇದಕ್ಕೆ ವೇದಿಕೆಯಾಗಿದ್ದು “ಪುಟಾಣಿ ಪ್ರಪಂಚ’.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ 24*7 ನ್ಯೂಸ್ ವತಿಯಿಂದ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಸಹಯೋಗದಲ್ಲಿ ಒಂದರಿಂದ 10ನೇ ತರಗತಿ ಮಕ್ಕಳಿಗಾಗಿ ಭಾನುವಾರ ಏರ್ಪಡಿಸಿದ್ದ ಒಂದು ದಿನದ ಉಚಿತ ಬೇಸಿಗೆ ಶಿಬಿರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಇದನ್ನೂ ಓದಿ: ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!
ಯೋಗಾಯೋಗ ಎಂಬಂತೆ ಬೆಳಗ್ಗೆ 8 ಗಂಟೆಗೆ ಯೋಗದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರು ಸಸಿಗೆ ನೀರು ಎರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವರಲಾಲ್ ಆರ್ಯ ವಿವಿಧ ಆಸನಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಹುಮ್ಮಸ್ಸು ಹೆಚ್ಚಿಸಿದರು. ಪ್ರಾಣಾಯಾಮ, ವೃಕ್ಷಾಸನ, ತಾಡಾಸನ ಮುಂತಾದವುಗಳ ಮೂಲಕ ಸರಳವಾಗಿ ಯೋಗ ಕಲಿಯಲು ಸಲಹೆ ನೀಡಿದರು.
ನೃತ್ಯಗಾರ್ತಿ ರುಕ್ಸಾರ ಸಂಗೀತದೊಂದಿಗೆ ಝಂಬಾ ನೃತ್ಯ ಪ್ರದರ್ಶಿಸಿದರು. ಮಕ್ಕಳು, ತಾಯಂದಿರು ಅವರೊಂದಿಗೆ ಹೆಜ್ಜೆ ಹಾಕಿದರು.
ಇದನ್ನೂ ಓದಿ: ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ ಟಿಕೆಟ್! ಐಪಿಎಲ್ ಟಿಕೆಟ್ ಹಗರಣ ಎಂದು ಕಿಡಿಕಾರಿದ ಫ್ಯಾನ್ಸ್
ಚಿತ್ರಕಲೆ ಸ್ಪರ್ಧೆ:
“ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳತ್ತ ನಮ್ಮ ಕಾಳಜಿ ಕುರಿತು ಒಂದರಿಂದ 10ನೇ ತರಗತಿವರೆಗಿನ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಕ್ಕಳು ಚಿತ್ರಗಳ ಮೂಲಕ ಪರಿಸರ ಕಾಳಜಿ ಮೆರೆದರು. ಗ್ರಾಮೀಣ ಕ್ರೀಡೆಗಳು ಮರೆತು ಹೋಗುತ್ತಿರುವ ಈ ಸಂದರ್ಭದಲ್ಲಿ ಲಗೋರಿ, ಗೋಲಿ, ಬುಗರಿ, ಹಗ್ಗದಾಟ ಮುಂತಾದವುಗಳು ಭಾರತೀಯತೆಯನ್ನು ಮತ್ತೆ ನೆನಪಿಸಿದವು.
ಮಧ್ಯಾಹ್ನ ಸುಡು ಬಿಸಿಲಿನಲ್ಲಿ ರೇನ್ ಡ್ಯಾನ್ಸ್ ಮಕ್ಕಳಿಗೆ ಮುದ ನೀಡಿತು. ನತ್ಯ, ಸಂಗೀತ, ಭಾಷಣ ಮುಂತಾದ ಚಟುವಟಿಕೆಗಳು ಮಕ್ಕಳ ಪ್ರತಿಭೆಗೆ ವೇದಿಕೆಯಾದವು. ಒಟ್ಟಾರೆ ಇಡೀ ದಿನ ಹುಬ್ಬಳ್ಳಿಯಲ್ಲಿ ಹೊಸದೊಂದು ಪುಟಾಣಿ ಪ್ರಪಂಚ ಅನಾವರಣವಾಯಿತು. ಮೋಟು ಪತ್ಲು, ಮಿಕ್ಕಿ ಮೌಸ್ ಸೇರಿ ವಿವಿಧ ಕಾರ್ಟೂನ್ ಗೊಂಬೆಗಳು ಶಿಬಿರಕ್ಕೆ ಮೆರುಗು ತಂದವು.
ಇದನ್ನೂ ಓದಿ: ದೇಶದ ಅತಿದೊಡ್ಡ ಸುರಂಗಮಾರ್ಗ ಜೊಜಿಲಾ; ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಚಾರಕ್ಕೆ ತಯಾರಿ ಜೋರು
ಕಠಿಣ ಪರಿಶ್ರಮ ಅಗತ್ಯ
ಸಂಜೆ ನಡೆದ ಸಮಾರೋಪದಲ್ಲಿ ಪಾಲ್ಗೊಂಡ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು, “ಕಠಿಣ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಚಿಕ್ಕಂದಿನಲ್ಲೇ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಇದನ್ನು ನಮ್ಮ ತಂದೆ ಡಾ. ವಿಜಯ ಸಂಕೇಶ್ವರ ಅವರು ಯಾವತ್ತೂ ಹೇಳುತ್ತಿರುತ್ತಾರೆ. ಪುಟಾಣಿ ಪ್ರಪಂಚ ಇದೇ ವರ್ಷ ಆರಂಭಿಸಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಾಯೋಜಕರು
ಹುಬ್ಬಳ್ಳಿಯ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋರ್ಟಸ್, ಸುಮನ್ ಎಂಟರ್ಪೆಸಿಸ್ (ಪತಂಜಲಿ&ಪ್ರಕೃತಿಯ ಆಶೀರ್ವಾದ), ಸಂಸ್ಕಾರ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸೇಂಟ್ ಆ್ಯಂಥೋನಿ ಪಬ್ಲಿಕ್ ಸ್ಕೂಲ್, ಸ್ವಾದಂ, ಎಂ.ಆರ್. ಸ್ವಿಮ್ಮಿಂಗ್ ಪೂಲ್ಸ್&ಸ್ಪಾ ಮತ್ತು ಆದಿತ್ಯಾ ಮಿಲ್ಕ್ ಸಂಸ್ಥೆಯವರು ಪ್ರಾಯೋಜಕತ್ವ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಚುನಾವಣೆ ಇನ್ನೇನು ಶುರು; ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ತೀವ್ರ ಕಸರತ್ತು