ಕೋಲಾರ: ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಉಚಿತ ಪೆಟ್ರೋಲ್ ಎಂದಿದ್ದೇ ತಡ ಬೈಕ್ ಸವಾರರು ಪೆಟ್ರೋಲ್ ಬಂಕ್ನಲ್ಲಿಯೇ ಮುಗಿಬಿದ್ದ ಪ್ರಸಂಗ ಕೋಲಾರದ ಮಾಲೂರಿನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಪೆಟ್ರೋಲ್ ಉಚಿತ ಎಂದು ಹೇಳಲಾಗಿತ್ತು. ಇದನ್ನೇ ಸದಾವಕಾಶ ಮಾಡಿಕೊಂಡ ಬೈಕ್ ಸವಾರರು ಪೆಟ್ರೋಲ್ಗಾಗಿ ಮುಗಿಬಿದ್ದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸೇರಿದಂತೆ ಹಲವಾರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಇದಕ್ಕಾಗಿ ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಪೆಟ್ರೋಲ್ ವ್ಯವಸ್ಥೆಯನ್ನು ಮಾಡಿದ್ದರು.
ಜೆಡಿಎಸ್ ಟೀ ಶರ್ಟ್ ಹಾಕಿ ಬೈಕ್ ರ್ಯಾಲಿಗೆ ಬಂದವರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು,ಬೈಕ್ ಮೇಲೆ RG ಎಂದು ಮಾರ್ಕ್ ಹಾಕಿ ಕಳುಹಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಿಳೆಯರಿಗೆ ಟೋಕನ್ ವಿತರಣೆ, ಕಾರ್ಯಕ್ರಮ ಮುಗಿದ ಬಳಿಕ ಅಕ್ಕಿ ಮೂಟೆ ನೀಡುವುದಾಗಿ ಭರವಸೆ ನೀಡಲಾಗಿತ್ತು.