ಮಡಿಕೇರಿ : ರಾಮನಗರ ಪಿರಮಿಡ್ ಧ್ಯಾನಮಂದಿರ ಹಾಗೂ ವಿವಿಧ ಜಿಲ್ಲೆಗಳ ಪಿರಮಿಡ್ ಕೇಂದ್ರಗಳ ಪಿರಮಿಡ್ ಮಾಸ್ಟರ್ಸ್ಗಳಿಂದ ಮಡಿಕೇರಿಯ ಓಂಕಾರ ಸದನದಲ್ಲಿ ಇತ್ತೀಚೆಗೆ ಅನಾಪಾನಸತಿ ಧ್ಯಾನ ಉಚಿತ ಶಿಬಿರ ಆಯೋಜಿಸಲಾಗಿತ್ತು.
ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಎಚ್.ಎಂ.ಕೃಷ್ಣ ಮಾತನಾಡಿ, ಪ್ರತಿಯೊಬ್ಬರೂ ಧ್ಯಾನದಿಂದ ಪ್ರಯೋಜನ ಪಡೆಯಲಿ ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಅನಾಪಾನಸತಿ ಧ್ಯಾನದ ಸತ್ಯತೆಯನ್ನು ದೃಢಪಡಿಸಿಕೊಂಡು ನಗರದ ಮನೆ ಮನೆಗೆ ತೆರಳಿ ಧ್ಯಾನದಿಂದ ದೊರೆಯುವ ಲಾಭದ ಬಗ್ಗೆ ನಿವಾಸಿಗಳಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂದರು.
ರಾಮನಗರದ ಪಿರಮಿಡ್ ಕೇಂದ್ರದ ಸ್ಥಾಪಕ ಕೃಷ್ಣಪ್ಪ ಮಾತನಾಡಿ, ಮಡಿಕೇರಿಯಲ್ಲಿ ಪಿರಮಿಡ್ ಕೇಂದ್ರ ಸ್ಥಾಪಿಸಲು ಜನರು ಸಹಕಾರ ನೀಡಬೇಕೆಂದು ಕೋರಿದರು.
ಶಿಬಿರದ ಮಾಸ್ಟರ್ ದಿವ್ಯಾಶ್ರೀ, ಪತ್ರಕರ್ತ ಜಿ.ರಾಜೇಂದ್ರ, ಬೆಂಗಳೂರಿನ ಬ್ರಹ್ಮಶ್ರೀ ಧ್ಯಾನ ಕೇಂದ್ರದ ಪ್ರೇಮಾನಾಥ ಗುಪ್ತ, ಸುರೇಶ್ ಕಲಬುರಗಿ ಇತರರು ಇದ್ದರು. ಕಲಾವಿದ ಗಣೇಶ್ ಕುಮಾರ್ ಹಾಗೂ ಸಂಗಡಿಗರಿಂದ ಸಂಗೀತಗೋಷ್ಠಿ ಆಯೋಜಿಸಲಾಗಿತ್ತು. ಧ್ಯಾನ ಶಿಬಿರ ಆಯೋಜಿಸಲು ಶ್ರಮಿಸಿದ ಎಚ್.ಎಂ.ಕೃಷ್ಣ ಹಾಗೂ ಕುಟುಂಬದವರನ್ನು ಸನ್ಮಾನಿಸಲಾಯಿತು.