ಹಾಸನ: ಲೋಕಸಭಾ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿದ್ದ 4,40, 650 ಲಕ್ಷ ರೂ. ಮೌಲ್ಯದ ಸೀರೆಗಳು, ಪ್ಯಾಂಟ್ ಮತ್ತು ಶರ್ಟ್ಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ಬಾಣವಾರದಲ್ಲಿ ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ದಾಖಲೆ ರಹಿತವಾಗಿ ಅಪಾರ ಪ್ರಮಾಣದ ಬಟ್ಟೆ, ಬಂಗಾರ ಹಾಗೂ ಇತರ ವಸ್ತು ಸಂಗ್ರಹ, ಸಾಗಣೆ ನಿಷೇಧಿಸಲಾಗಿದೆ. ಅಲ್ಲದೇ, ಈ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ, ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖ್ಯಾತ ಉದ್ಯಮಿಗಳಿಗೆ ಸೇರಿದ ಮಹಾವೀರ ಟೆಕ್ಸ್ಟೈಲ್ಸ್ ಮತ್ತು ಹುಳಿಯಾರು ರಸ್ತೆಯಲ್ಲಿರುವ ಪಿಕೆ ಕ್ಲಾಸ್ ಸೆಂಟರ್ನಲ್ಲಿ 4,40,650 ಲಕ್ಷ ರೂ. ಮೌಲ್ಯದ ಸೀರೆಗಳು, ಪ್ಯಾಂಟ್ಗಳು, ಶರ್ಟ್ಗಳನ್ನು ಸಂಗ್ರಹಿಸಿದ್ದರು.
ಅಕ್ಷರ ದಾಸೋಹ ಸಮಿತಿಯ ನಿರ್ದೇಶಕ ಮಹೇಶ್ ಕೋಂ ಕಲ್ಲೇಶಪ್ಪ ಅವರು ಈ ವಿಷಯವನ್ನು ಹಾಸನ ಜಿಲ್ಲೆ ವಾಣಿಜ್ಯ ತೆರಿಗೆ ಆಯುಕ್ತ ಮಂಜುನಾಥ್ ಅವರಿಗೆ ತಿಳಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಮಂಜುನಾಥ್ ತಮ್ಮ ತಂಡದೊಂದಿಗೆ ಮಹಾವೀರ ಟೆಕ್ಸ್ಟೈಲ್ಸ್ ಮತ್ತು ಪಿಕೆ ಕ್ಲಾಸ್ ಸೆಂಟರ್ ಮೇಲೆ ದಾಳಿ ನಡೆಸಿ, ಸೀರೆ, ಪ್ಯಾಂಟ್ ಹಾಗೂ ಶರ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಗರದ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಜಿಲ್ಲಾ ನ್ಯಾಯಾಧೀಶರ ಗಮನಕ್ಕೂ ತರಲಾಗಿದೆ. ಪ್ರಕರಣದ ಸಂಬಂಧ ಮಾಲೀಕರು ಸೂಕ್ತ ದಾಖಲಾತಿಗಳನ್ನು ನೀಡಿ ಅವರ ಬಟ್ಟೆಗಳನ್ನು ಹಿಂಪಡೆಯಬಹುದಾಗಿದೆ. ಸದ್ಯ ಈ ಸಾಮಗ್ರಿಗಳು ಬಾಣವಾರ ಪೊಲೀಸ್ ಠಾಣೆಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.