ಅಯೋಧ್ಯೆ: ಸಾಕಷ್ಟು ಕಾಲ ಕಾನೂನು ಹೋರಾಟದ ಬಳಿಕ ಬಹುಜನರ ಅಪೇಕ್ಷೆಯ ಮೇರೆಗೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಮಂಗಳವಾರದಿಂದ ಆರಂಭವಾಗಿದೆ.
ತಾತ್ಕಾಲಿಕ ದೇಗುಲದಲ್ಲಿ ಇರುವ ರಾಮಲಲ್ಲಾ ದೇವರ ಮೂರ್ತಿಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಮತಾ ನೃತ್ಯ ಗೋಪಾಲ ದಾಸ್ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಅವರು ರಾಮಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯವನ್ನು ಇಂದಿನಿಂದ ಆರಂಭಿಸುತ್ತಿರುವುದಾಗಿ ಘೋಷಿಸಿದರು.
ನಿರ್ಮಾಣ ಕಾರ್ಯ ಆರಂಭವಾಗುವ ಮುನ್ನ ರಾಮ ಜನ್ಮಭೂಮಿ ನ್ಯಾಸ್ನ ಮುಖ್ಯಸ್ಥರೂ ಆಗಿರುವ ಮಹಾಂತಾ ನೃತ್ಯ ಗೋಪಾಲ್ ದಾಲ್ ಭೂಮಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ: ಭಾರತ-ಚೀನಾ ನಡುವಿನ ಈಗಿನ ಬಿಕ್ಕಟ್ಟು ಡೊಕ್ಲಾಮ್ ಬಿಕ್ಕಟ್ಟಿಗಿಂತ ದೊಡ್ಡದು
ಅಂದಾಜು 27 ವರ್ಷಗಳ ಹೋರಾಟದ ಬಳಿಕ 2020ರ ಮಾರ್ಚ್ 25ರಂದು ಅಯೋಧ್ಯೆಯ ತಾತ್ಕಾಲಿಕ ದೇಗುಲದಲ್ಲಿದ್ದ ರಾಮ ಲಲ್ಲಾ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮಾನಸ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
2019ರ ನವೆಂಬರ್ 9ರಂದು ದೇಗುಲ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್ ಒಂದು ಶತಮಾನಕ್ಕೂ ಹೆಚ್ಚುಕಾಲದಿಂದ ಇದ್ದ ವಿವಾದವನ್ನು ಇತ್ಯರ್ಥ ಪಡಿಸಿತ್ತು.
5 ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ನ ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್ನ ಆಗಿನ ನ್ಯಾಯಮೂರ್ತಿ ರಂಜನ್ ಗೊಗೊಯ್, ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮ ಜನಿಸಿದ್ದ ಎಂಬ ಹಿಂದು ಧರ್ಮೀಯರ ನಂಬಿಕೆ ವಿವಾದಾತೀತ ಎಂದು ತೀರ್ಪು ನೀಡಿದ್ದರು.